ಶಿವಮೊಗ್ಗ: ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ಬ್ರಾಹ್ಮಣ ವಧು– ವರರ ವಿವಾಹ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಧು-ವರರ ಸಮಾವೇಶದಲ್ಲಿ ಮೋಸ ನಡೆದಿದೆ ಎಂದು ಆರೋಪಿಸಲಾಗಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಮುಖಾಮುಖಿ ಸಮಾವೇಶದಲ್ಲಿ ಪುರೋಹಿತರು ಅಡುಗೆ ಭಟ್ಟರು, ಸಣ್ಣ ವ್ಯಾಪಾರಿಗಳು, ಡಾಕ್ಟರ್, ಎಂಜಿನಿಯರ್ಗಳು, ರೈತರು ಎಲ್ಲಾ ತರಹದ ಉದ್ಯೋಗದಲ್ಲಿರುವ ಬ್ರಾಹ್ಮಣ ಸಮಾಜದವರು ಭಾಗವಹಿಸಬಹುದಾಗಿತ್ತು. ಎರಡನೇ ಮದುವೆಗೂ ಅವಕಾಶ ನೀಡಲಾಗಿತ್ತು.
ಸಮಾವೇಶಕ್ಕೆ ರಾಯಚೂರು, ಅಥಣಿ, ಗುಲ್ಬರ್ಗ, ಹುಬ್ಬಳ್ಳಿ, ತುಮಕೂರು ಮೈಸೂರು ಮೊದಲಾದ ರಾಜ್ಯದ ನಾನಾ ಭಾಗಗಳಿಂದ ಸಮಾವೇಶಕ್ಕೆ ಸೇರಿದ್ದರು. ಸಮಾವೇಶಕ್ಕೆ ತಲಾ ₹ 3ಸಾವಿರ ಪಾವತಿಸಿ ಭಾಗವಹಿಸಿದ್ದರು.
ವರ ಮತ್ತು ಆತನ ಮನೆ ಕಡೆಯವರು ಮಾತ್ರ ಭಾಗವಹಿಸಿದ್ದು, ವಧುವಿನ ಕಡೆಯವರು ಹೆಚ್ಚು ಮಂದಿ ಭಾಗವಹಿಸಿಲ್ಲ ಎಂದು ಆರೋಪಿಸಿದರು. ಇದರಿಂದ ಆಕ್ರೋಶಗೊಂಡು ವಿವಾಹ ವೇದಿಕೆಯ ವಿದ್ಯಾಶ್ರೀ ಅವರನ್ನು ಮುತ್ತಿಗೆ ಹಾಕಿದ ವರನ ಕಡೆಯವರು ಪಾವತಿಸಿದ ಹಣ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು. ನಂತರ ವಿದ್ಯಾಶ್ರೀ ಕಡೆಯವರು ಎಲ್ಲರಿಗೂ ಹಣ ವಾಪಸ್ ಮಾಡಿದರು.