ಬೆಂಗಳೂರು: ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ನಿವಾಸಿ ಡೇವಿಡ್ (30) ಎಂಬಾತನ ರುಂಡ ಕತ್ತರಿಸಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಗಂಗಮ್ಮನಗುಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಸಾದ್ ಅಲಿಯಾಸ್ ಮೆಂಟಲ್, ವೇಣು, ಮಹೇಶ್ ಹಾಗೂ ಮಣಿಕಂಠ ಬಂಧಿತರು. ಡೇವಿಡ್ ಹಾಗೂ ಆರೋಪಿ ವೇಣು, ಒಂದೇ ಹುಡುಗಿಯನ್ನು ಇಷ್ಟಪಡುತ್ತಿದ್ದರು. ಆಕೆಯ ವಿಷಯವಾಗಿ ಅವರ ನಡುವೆ ಜಗಳ ಆಗಿತ್ತು. ಅದೇ ಕಾರಣಕ್ಕೆ ವೇಣು, ತನ್ನ ಸ್ನೇಹಿತರ ಜತೆ ಸೇರಿ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದರು.
‘ಮೃತ ಡೇವಿಡ್, 2006ರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ. ಆತನ ವಿರುದ್ಧ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಒಂಬತ್ತು ತಿಂಗಳಿನಿಂದ ಎಚ್ಎಂಟಿ ಆಸ್ಪತ್ರೆಯಲ್ಲಿಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.’
‘ಪಾರ್ಟಿ ಮಾಡೋಣವೆಂದು ಮೇ 3ರಂದು ರಾತ್ರಿ ಡೇವಿಡ್ನನ್ನು ರಾಮಚಂದ್ರಾಪುರ ಬಸ್ ನಿಲ್ದಾಣದ ಬಳಿ ಕರೆಸಿಕೊಂಡಿದ್ದ ಆರೋಪಿಗಳು, ಕಂಠಪೂರ್ತಿ ಕುಡಿಸಿದ್ದರು. ನಂತರ, ಮಚ್ಚು–ಲಾಂಗುಗಳಿಂದ ಹೊಡೆದಿದ್ದರು. ರುಂಡವನ್ನು ಕತ್ತರಿಸಿ ಪರಾರಿಯಾಗಿದ್ದರು ಎಂದರು.
ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಊರೂರು ಸುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಬಂಧಿಸಿದ್ದೇವೆ. ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.