ಮಂಗಳೂರು: ಯುಎಇಯಲ್ಲಿ ಸಿಲುಕಿದ್ದ ಭಟ್ಕಳ ಮತ್ತು ಸುತ್ತಲಿನ 178 ಪ್ರಯಾಣಿಕರನ್ನು ಕರೆತಂದ ಸ್ಪೈಸ್ ಜೆಟ್ ಬಾಡಿಗೆ ವಿಮಾನವು ಮಂಗಳವಾರ ಮಧ್ಯರಾತ್ರಿ 1.30 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಮಂಗಳೂರಿನಿಂದ ವಿಶೇಷ ಬಸ್ಗಳ ಮೂಲಕ ಎಲ್ಲ ಪ್ರಯಾಣಿಕರನ್ನು ಭಟ್ಕಳಕ್ಕೆ ಕರೆದೊಯ್ಯಲಾಗಿದೆ.
ದುಬೈನ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಅವರು ಜೂನ್ 12 ರಂದು ಯುಎಇಯಿಂದ ಭಟ್ಕಳ ಮತ್ತು ಸುತ್ತಲಿನ ಜನರನ್ನು ಪ್ರಥಮ ಚಾರ್ಟರ್ಡ್ ವಿಮಾನದ ಮೂಲಕ ಭಟ್ಕಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಇದೀಗ ಎರಡನೇ ಚಾರ್ಟರ್ಡ್ ವಿಮಾನದ ಮೂಲಕ ಆರು ಮಕ್ಕಳು ಸೇರಿದಂತೆ 178 ಜನರನ್ನು ಭಟ್ಕಳಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ 8.30 ಕ್ಕೆ ಸುಮಾರಿಗೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ತಡರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಭಟ್ಕಲ್ ಮುಸ್ಲಿಂ ಜಮಾಅತ್ ಮಂಗಳೂರಿನ ಪದಾಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಇದ್ದು, ಪ್ರಯಾಣಿಕರಿಗೆ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು.
ನಂತರ ಎಲ್ಲಾ ಪ್ರಯಾಣಿಕರನ್ನು ಐದು ಬಸ್ಗಳ ಮೂಲಕ ಭಟ್ಕಳಕ್ಕೆ ಕರೆತರಲಾಯಿತು. ಜಿಲ್ಲಾಡಳಿತದ ನಿರ್ದೇಶನದಂತೆ ತಂಝೀಮ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.