ಮೂಡುಬಿದಿರೆ: ‘ಅರ್ಜಿ ಹಾಕದೆ ಸಿಗುವ ಪ್ರಶಸ್ತಿಗೆ ಗೌರವ ಹೆಚ್ಚು’ ಎಂದು ಅಜಕ್ಕಳ ಗಿರೀಶ ಭಟ್ ಅಭಿಪ್ರಾಯಪಟ್ಟರು.
ಇಲ್ಲಿನ ಸಮಾಜ ಮಂದಿರದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ 2022ನೇ ಸಾಲಿನ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಬೆಂಗಳೂರಿನ
ಎಂ. ಆರ್.ದತ್ತಾತ್ರಿ ಅವರಿಗೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ‘ಮಾನವತೆಯನ್ನು ಪೋಷಿಸುವ ಸಾಹಿತ್ಯ ಇಂದಿನ ಅಗತ್ಯವಾಗಿದೆ. ಅಂತಹ ಮಾನವೀಯ ಸಾಹಿತ್ಯ ಅರಳಿಸುವ ಸಾಹಿತಿಗಳನ್ನು ಜಗತ್ತು ಗೌರವಿಸಬೇಕು’ ಎಂದರು.
ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದ್ದರು. ಪೀಠದ ಪ್ರಧಾನ ನಿದೇಶಕ ಡಾ. ನಾ.ಮೊಗಸಾಲೆ ಸ್ವಾಗತಿಸಿದರು. ಸಹ ನಿದೇರ್ಶಕ ಸದಾನಂದ ನಾರಾವಿ ಪ್ರಶಸ್ತಿ ಪತ್ರ ವಾಚಿಸಿದರು. ಮುನಿರಾಜ ರೆಂಜಾಳ ನಿರೂಪಿಸಿದರು. ಕೋಶಾಧ್ಯಕ್ಷ ನಮಿರಾಜ ಶೆಟ್ಟಿ ವಂದಿಸಿದರು.
ವರ್ಧಮಾನ ಸಾಹಿತ್ಯ ಪ್ರಶಸ್ತಿಯು ₹25 ಸಾವಿರ ನಗದು, ತಾಮ್ರಪತ್ರ ಒಳಗೊಂಡಿದೆ. ‘ಪ್ರಶಸ್ತಿ ಮೊತ್ತವನ್ನು ಕಾಲೇಜಿನಲ್ಲೂ ಶುಲ್ಕ ಕಟ್ಟಲಾಗದ ವಿದ್ಯಾರ್ಥಿಗಳಿಗೆ, ಸಂಶೋಧನಾತ್ಮ ಬರಹಗಳ ‘ಚಿಂತನ ಬಯಲು’ ಎಂಬ ತ್ರೈಮಾಸಿಕ ಪತ್ರಿಕೆಗೆ ವಿನಿಯೋಗಿಸುವುದಾಗಿ ಅಜಕ್ಕಳ ಗಿರೀಶ ಭಟ್ ಹೇಳಿದರು.
ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು ₹15 ಸಾವಿರ ನಗದು, ತಾಮ್ರಪತ್ರ, ಸನ್ಮಾನ ಒಳಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.