ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಭಾನುವಾರ ಇಲಿ ಪಾಷಾಣ ತಿಂದು ಮೃತಪಟ್ಟದೆ.
ಬಜತ್ತೂರು ಗ್ರಾಮದ ಕೆಮ್ಮಾರ ನಿವಾಸಿ, ನಿವೃತ ಸೈನಿಕ ಸೈಜು ಎಂಬುವರ ಪುತ್ರಿ ಶ್ರೇಯಾ ಮೃತಪಟ್ಟ ಮಗು.
ಶನಿವಾರ ಬೆಳಿಗ್ಗೆ ಮಗುವಿನ ತಂದೆ- ತಾಯಿ ಮನೆಯ ನಾಯಿ ಗೂಡಿನ ಮೇಲಿದ್ದ ಪಿವಿಸಿ ಪೈಪ್ಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ತೆಗೆದು ಸ್ವಚ್ಛಗೊಳಿಸಿದ್ದರು. ಎಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದ ಇಲಿ ಪಾಷಾಣ ಟ್ಯೂಬ್ ಕೂಡಾ ಇತ್ತು.
ಮನೆಯವರು ಕೆಲಸದಲ್ಲಿ ಮಗ್ನರಾಗಿದ್ದ ವೇಳೆ ಅಲ್ಲಿಗೆ ಆಟವಾಡಿಕೊಂಡು ಬಂದ ಮಗು ಇಲಿ ಪಾಷಾಣವನ್ನು ತಿಂದಿದೆ. ಮಧ್ಯಾಹ್ನದ ವೇಳೆಗೆ ಮಗುವಿಗೆ ವಾಂತಿ ಆರಂಭವಾಗಿದ್ದು, ತಕ್ಷಣ ಮನೆಯವರು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಬಳಿಕ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆಯೊಯ್ಯಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.