ಮಂಗಳೂರು: ಸಣ್ಣಕಥೆಗಳು ಬದುಕಿನ ಬೇರೆ ಬೇರೆ ಮುಖಗಳನ್ನು ಅನಾವರಣ ಮಾಡುವುದರಿಂದ ಈ ಸಾಹಿತ್ಯ ಪ್ರಕಾರವನ್ನು ಒಟ್ಟಾಗಿ ಸಮಕಾಲೀನ ಇತಿಹಾಸ ಎಂದು ಕರೆಯಬಹುದು. ಕಳೆದ ಶತಮಾನದ ಎಲ್ಲ ಸಣ್ಣಕಥೆಗಳನ್ನು ಸಮಗ್ರವಾಗಿ ಓದಿದರೆ ಒಂದು ಶತಮಾನ ಕಾಲದ ಜನಜೀವನ ತಿಳಿದು ಬರುತ್ತದೆ ಎಂದು ಸಾಹಿತಿ ಡಾ. ವಸಂತಕುಮಾರ ಪೆರ್ಲ ಅಭಿಪ್ರಾಯಪಟ್ಟರು.
ಕಲ್ಲಚ್ಚು ಪ್ರಕಾಶನ ಪ್ರಕಟಿಸಿರುವ, ಜಯಾನಂದ ಕಾಸರಗೋಡು ಅವರ ಸಣ್ಣಕಥೆಗಳ ಸಂಕಲನ ‘ಕಾರಣಿಕ’ವನ್ನು ನಗರದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಯಾನಂದರ ಸಣ್ಣಕಥೆಗಳು ಮಲಯಾಳದ ಅನೂಹ್ಯತೆ ಮತ್ತು ಕನ್ನಡದ ಕಥನಶಕ್ತಿಯನ್ನು ಮೇಳೈಸಿಕೊಂಡಿವೆ. ಬರೆದದ್ದು ಕಡಿಮೆಯಾದರೂ ಗಡಿಪ್ರದೇಶದ ಸಂಸ್ಕೃತಿಯನ್ನು ಕಟ್ಟಿಕೊಡುವುದರಿಂದ ಅವರ ಕಥೆಗಳು ಸಶಕ್ತವಾಗಿವೆ ಎಂದು ಪೆರ್ಲ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಕನ್ನಡದಲ್ಲಿ ಪ್ರತಿವರ್ಷ ಪ್ರಕಟವಾಗುತ್ತಿರುವ ಸಾವಿರಾರು ಪುಸ್ತಕಗಳು ಕನ್ನಡದ ಓದು ಪರಂಪರೆ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿ ಎಂದರು.
ನಿವೃತ್ತ ಪ್ರಾಧ್ಯಾಪಕ ಪಿ.ಎನ್. ಮೂಡಿತ್ತಾಯ ಕೃತಿ ಪರಿಚಯ ಮಾಡಿದರು. ಕಾಸರಗೋಡಿನ ಸಣ್ಣ ಕಥೆಗಾರರಾದ ಶಶಿ ಭಾಟಿಯಾ ಮತ್ತು ಸ್ನೇಹಲತಾ ದಿವಾಕರ್ ಮಾತಾಡಿದರು.
ಲೇಖಕ ಆಸ್ಟಿನ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಲೇಖಕಿ ಝೀಟಾ ಲೋಬೊ, ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್, ಮುಲ್ಕಿಯ ಉಪನ್ಯಾಸಕಿ ವಿಜಯಲಕ್ಷ್ಮಿ ನಾಯಕ್ ಇದ್ದರು.