ಮಂದಿರದ ಒಳಗೆ ಅಮೃತಶಿಲೆಯಲ್ಲಿ ನಿರ್ಮಿಸಿದ ಭಾರತಮಾತೆಯ ಆರಡಿ ಎತ್ತರದ ವಿಗ್ರಹ, ಭಾರತದ ಮಾತೆಯ ಎಡ ಮತ್ತು ಬಲ ಭಾಗಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ ಜೈ ಜವಾನ್, ಜೈ ಕಿಸಾನ್ ಪ್ರತಿಮೆಗಳು, ಭಾರತಾಂಬೆಯ ಎದುರಿಗೆ ಯೋಧರ ಸಾಹಸ, ಸಾಧನೆ ಮತ್ತು ಬಲಿದಾನ ನೆನಪಿಸುವ ಅಮರ ಜವಾನ್ ಸ್ಮಾರಕ ಶಿಲೆ, ಮೇಲ್ಭಾಗದಲ್ಲಿ ಸಮೃದ್ಧ ಭಾರತವನ್ನು ಕಟ್ಟಿದ ದಾರ್ಶನಿಕರ, ವೀರ ಸೇನಾನಿಗಳ ತೈಲ ಶಿಲ್ಪಗಳಿವೆ. ಅವರಗಿರಿ ಆವರಣದಲ್ಲಿ ಯುದ್ಧಭೂಮಿಯ ಚಿತ್ತಾರಗಳಿವೆ. ಮಂದಿರದ ಮುಂಭಾಗ ಮತ್ತು ಹಿಂಭಾಗದಲ್ಲಿ ಯೋಧರ ಹುಮ್ಮಸ್ಸಿನ ಬಿಂಬ-ಪ್ರತಿಬಿಂಬಗಳಿದ್ದು, ದೇವತಾರಾಧನೆ, ರಾಷ್ಟ್ರಾರಾಧನೆ, ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತ ಕಟ್ಟುವ ಪ್ರಕ್ರಿಯೆಗಳಿಗೆ `ಅಮರಗಿರಿ' ವಿಶೇಷ ತಾಣವಾಗಿ ರೂಪುಗೊಂಡಿದೆ.