ಪುತ್ತೂರು : ಮಂಗಳವಾರ ಸಂಜೆಯಿಂದ ಎಡಬಿಡದೆ ಸುರಿಯಲಾರಂಭಿಸಿದ ಭಾರಿ ಮಳೆ ಬುಧವಾರವೂ ಮುಂದುವರಿದಿದ್ದು, ಪುತ್ತೂರು–ಪಾಣಾಜೆ ರಸ್ತೆಯಲ್ಲಿನ ಚೆಲ್ಯಡ್ಕ ಮುಳುಗು ಸೇತುವೆ ಮತ್ತೆ ಜಲಾವೃತಗೊಂಡಿದೆ.
ಚೆಲ್ಯಡ್ಕ ಮುಳುಗು ಸೇತುವೆ ಜಲಾವೃತಗೊಂಡ ಹಿನ್ನಲೆಯಲ್ಲಿ ಪುತ್ತೂರು -ಪಾಣಾಜೆ ರಸ್ತೆಯ ಕುಂಜೂರುಪಂಜ- ಅಜ್ಜಿಕಲ್ಲು -ಚೆಲ್ಯಡ್ಕ -ಉಪ್ಪಳಿಗೆ ನಡುವಣ ಸಂಚಾರ ಸ್ಥಗಿತಗೊಡಿದ್ದು, ಈ ಭಾಗದ ಮಂದಿ ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪುತ್ತೂರಿನ ಬೈಪಾಸ್ ರಸ್ತೆ ಬದಿಯ ಗುಡ್ಡ ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ. ಪುತ್ತೂರಿನ ಉಪನೋಂದಣಿ ಕಚೇರಿ ಎದುರು ಸರ್ಕಾರಿ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಚರಂಡಿ ಮುಚ್ಚುಗಡೆಯಾಗಿ ಮಳೆನೀರು ತುಂಬಿಕೊಂಡಿದೆ.