ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | 153 ಜನರಲ್ಲಿ ಕೋವಿಡ್‌ ಸೋಂಕು ಪತ್ತೆ

ಸೋಂಕಿತರ ಸಾವಿನ ಸಂಖ್ಯೆ 176ಕ್ಕೆ; 124 ಮಂದಿ ಗುಣಮುಖ
Last Updated 4 ಆಗಸ್ಟ್ 2020, 5:37 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 153 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಸೋಮವಾರ ಲಭಿಸಿದ ವರದಿಗಳ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆ 6,168ಕ್ಕೆ ಏರಿದೆ.

‘ಮಂಗಳೂರು ನಗರ ಹಾಗೂ ತಾಲ್ಲೂಕಿನ 119, ಬಂಟ್ವಾಳ ತಾಲ್ಲೂಕಿನ 11, ಬೆಳ್ತಂಗಡಿ ತಾಲ್ಲೂಕಿನ ಆರು, ಪುತ್ತೂರು ತಾಲ್ಲೂಕಿನ ನಾಲ್ಕು ಮತ್ತು ಸುಳ್ಯ ತಾಲ್ಲೂಕಿನ ಒಬ್ಬರಲ್ಲಿ ಕೋವಿಡ್‌ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ಮಂಗಳೂರಿನಲ್ಲಿ ಪರೀಕ್ಷೆಗೊಳಗಾದ ಹೊರ ಜಿಲ್ಲೆಗಳ 12 ಜನರಲ್ಲೂ ಸೋಂಕು ಇರುವುದು ಖಚಿತವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಈವರೆಗೆ ಮಂಗಳೂರು ತಾಲ್ಲೂಕಿನಲ್ಲಿ 4,394, ಬಂಟ್ವಾಳ ತಾಲ್ಲೂಕಿನಲ್ಲಿ 571, ಪುತ್ತೂರು ತಾಲ್ಲೂಕಿನಲ್ಲಿ 267, ಬೆಳ್ತಂಗಡಿ ತಾಲ್ಲೂಕಿನಲ್ಲಿ 260, ಮೂಡುಬಿದಿರೆ ತಾಲ್ಲೂಕಿನಲ್ಲಿ 93, ಮೂಲ್ಕಿ ತಾಲ್ಲೂಕಿನಲ್ಲಿ 90, ಸುಳ್ಯ ತಾಲ್ಲೂಕಿನಲ್ಲಿ 72 ಮತ್ತು ಕಡಬ ತಾಲ್ಲೂಕಿನಲ್ಲಿ 53 ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೊಳಗಾಗಿದ್ದ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳ 368 ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ಖಚಿತಪಟ್ಟಿದೆ.

124 ಮಂದಿ ಗುಣಮುಖ:ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮತ್ತು ಮನೆಗಳಲ್ಲೇ ಪ್ರತ್ಯೇಕ ವಾಸದಲ್ಲಿದ್ದ 124 ಜನರು ಗುಣಮುಖರಾಗಿರುವುದು ಸೋಮವಾರ ದೃಢಪಟ್ಟಿದೆ. ಈವರೆಗೆ ಒಟ್ಟು 2,854 ಮಂದಿ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 3,138 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದ 800ಕ್ಕೂ ಅಧಿಕ ಮಂದಿ ತಮ್ಮ ಮನೆಗಳಲ್ಲೇ ಪ್ರತ್ಯೇಕ ವಾಸದಲ್ಲಿದ್ದಾರೆ. ಮನೆಗಳಲ್ಲಿ ಪ್ರತ್ಯೇಕ ವಾಸಕ್ಕೆ ಅಗತ್ಯ ಸೌಲಭ್ಯ ಹೊಂದಿಲ್ಲದ ಸುಮಾರು 500 ಜನರನ್ನು ಕೊಣಾಜೆ ವಿದ್ಯಾರ್ಥಿ ನಿಲಯ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಸುಮಾರು 2,000ಕ್ಕೂ ಹೆಚ್ಚು ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ವಿಭಾಗ ಬಹುತೇಕ ಭರ್ತಿಯಾಗಿದೆ.

ಏಳು ಸಾವು ಘೋಷಣೆ:ಕೋವಿಡ್‌ ಸೋಂಕು ಪತ್ತೆಯಾದ ಬಳಿಕ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದ ಏಳು ಮಂದಿ ಮೃತಪಟ್ಟಿದ್ದು, ಅವರೆಲ್ಲರಿಗೂ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಸೋಮವಾರ ಮರಣ ಘೋಷಿಸಿರುವ ಎಲ್ಲ ಏಳು ಮಂದಿಯೂ ಮಂಗಳೂರು ತಾಲ್ಲೂಕಿನವರು. ಎಲ್ಲರೂ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಪೈಕಿ ಈವರೆಗೆ ಒಟ್ಟು 176 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT