ಮಂಗಳೂರು: ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ಇಂಡಿಯಾ ವಿಮಾನದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಯುವಕನನ್ನು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ಸಮೀಪದ ಮುಹಮ್ಮದ್ ಮುಹೀರ್ ಪಟ್ಲ ಎಂಬಾತ ಬುಧವಾರ ಸಂಜೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಮುಹೀರ್ ಬಳಿಯಿದ್ದ ಎಮೆರ್ಜೆನ್ಸಿ ಲೈಟ್ ಮತ್ತು ಸೋಲಾರ್ ವಾಲ್ಲೈಟ್ನೊಳಗೆ 233.18 ಗ್ರಾಂ ತೂಕದ ಚಿನ್ನವನ್ನು ಅಡಗಿಸಿಟ್ಟಿರುವುದು ಕಂಡು ಬಂತು. ವಶಪಡಿಸಿಕೊಂಡ ಚಿನ್ನದ ಮೌಲ್ಯ ₹9.39 ಲಕ್ಷ ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ನ ಸಹಾಯಕ ಆಯುಕ್ತ ರಾಜೇಶ್ ಪೂಜಾರಿ, ಸುಪರಿಟೆಂಡೆಂಟ್ಗಳಾದ ಶ್ರೀನಾಥ, ಅನೂಪ್ಕುಮಾರ್, ಸಿನ್ಮಯ ಪ್ರಧಾನ್, ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಈ ಕಾರ್ಯಾಚರಣೆ ನಡೆಸಿದರು.
ಟ್ಯಾಂಕರ್ ಡಿಕ್ಕಿ: ವಿದ್ಯಾರ್ಥಿ ಸಾವು ಮಂಗಳೂರು: ನಂತೂರ್ ಸರ್ಕಲ್ ಬಳಿ ಗುರುವಾರ ಸಂಜೆ ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಣ್ಣಗುಡ್ಡೆ ನಿವಾಸಿ ಕಾರ್ತಿಕ್ ಮಲ್ಯ ಮೃತಪಟ್ಟ ವಿದ್ಯಾರ್ಥಿ. ಬೈಕ್ ಹಿಂಬದಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹ್ಯಾದ್ರಿ ಕಾಲೇಜಿನ ವಿರುದ್ಧ ಸಂದೇಶ: ದೂರು ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಕೊರೊನಾ ವೈರಸ್ ಸೋಂಕಿದೆ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಈ ಬಗ್ಗೆ ಕಾಲೇಜಿನ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂದೇಶದಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದಲ್ಲಿ ಅಶ್ಲೀಲ ಚಿತ್ರಗಳು ಬರುತ್ತಿವೆ. ಅಲ್ಲದೇ ಕಾಲೇಜಿನಲ್ಲಿ ಕೊರೊನಾ ವೈರಸ್ ಸೋಂಕು ಇಲ್ಲ. ಹೀಗಾಗಿ ಇಂತಹ ಸುಳ್ಳು ಸಂದೇಶಗಳನ್ನು ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.