ಮಂಗಳೂರು: ನೇರಳೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಉಂಟಾಗಿರುವ ಕಾರಣ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ.
ಕಳೆದ ವರ್ಷ ಕೆ.ಜಿ.ಗೆ ₹100 ರಿಂದ ₹150ಕ್ಕೆ ಮಾರಾಟವಾಗಿದ್ದ ನೇರಳೆ ಹಣ್ಣು, ಈ ವರ್ಷ ₹300ಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದು, ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಈ ಬಾರಿ ಹಣ್ಣಿನ ಇಳುವರಿ ಅತ್ಯಂತ ಕಡಿಮೆ ಇರುವ ಕಾರಣ, ಹಣ್ಣಿನ ಬೆಲೆಯಲ್ಲಿ ಏರಿಕೆ ಉಂಟಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಸ್ಥರು.
ನೇರಳೆ ಹಣ್ಣಿನಲ್ಲಿ ಆಮ್ಲೀಯ ಅಂಶಗಳು ಹೆಚ್ಚಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಜೊತೆಗೆ ಮಧುಮೇಹ ಕಾಯಿಲೆಗೆ ಈ ಹಣ್ಣು ಉತ್ತಮ ಔಷಧವಾಗಿದೆ ಎಂಬ ನಂಬಿಕೆ ಜನರಲ್ಲಿ ಇರುವುದರಿಂದ ಬೆಲೆ ಹೆಚ್ಚಾದರೂ, ಜನರು ಹಣ್ಣಿನ ಖರೀದಿಗೆ ಆಸಕ್ತಿ
ತೋರುತ್ತಿದ್ದಾರೆ.
ಗಗನಕ್ಕೇರಿದ ರಂಬೂಟಾನ್ ಬೆಲೆ:
ರಂಬುಟನ್ ಹಣ್ಣು ದಕ್ಷಿಣ ಏಶಿಯಾ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ, ಥೈಲಾಂಡ್ ಮೂಲದ ವಿದೇಶಿ ಹಣ್ಣು. ಕೊರಾನಾ ನಂತರ ಈ ಹಣ್ಣಿಗೆ ದೇಶದಲ್ಲಿ ಬೇಡಿಕೆ ಹಚ್ಚಾಗಿದ್ದು, ಭಾರತದಲ್ಲೂ ಈ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ರಂಬೂಟಾನ್ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಕರಾವಳಿ, ಮಲೆನಾಡು ಹಾಗೇ ಕೇರಳ, ತಮಿಳುನಾಡು, ಗೋವಾ ಮುಂತಾದ ಕಡೆಗಳಲ್ಲಿ ರೈತರು ರಂಬೂಟಾನ್ ಬೆಳೆಯುತ್ತಿದ್ದಾರೆ.
ಇದು ಸಾಮಾನ್ಯವಾಗಿ ಬೇಸಿಗೆಯ ಏಪ್ರೀಲ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೋಬರ್ ತನಕವೂ ಈ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹400ರಂತೆ ಮಾರಾಟವಾಗುತ್ತಿದೆ.
ತರಕಾರಿ ಬೆಲೆ ಗಗನಕ್ಕೆ:
ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ತರಕಾರಿಗಳ ಇಳುವರಿ ಕಡಿಮೆಯಾಗಿದೆ.
ಟೊಮೆಟೊ, ಬೀನ್ಸ್, ಕ್ಯಾರೆಟ್, ಮೆಣಸಿನಕಾಯಿ ಸೇರಿದಂತೆ ತರಕಾರಿ ಬೆಲೆ ಹೆಚ್ಚಳವಾಗಿದೆ. ಕೆ.ಜಿಗೆ ₹20ರಿಂದ ₹30ಕ್ಕೆ ಸಿಗುತ್ತಿದ್ದ ಟೊಮೆಟೊ ಸದ್ಯ ₹40ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ತೊಂಡೆಕಾಯಿ ₹120, ಮೆಣಸಿನಕಾಯಿ ₹100, ಬೀನ್ಸ್ ₹120, ಬೆಂಡೆಕಾಯಿ ₹80, ಕ್ಯಾರೆಟ್ ₹80 ಹೀಗೆ ಬಹುತೇಕ ತರಕಾರಿಗಳ ದರ ಏರಿಕೆಯಾಗಿದೆ.
ಕ್ಯಾಬಿಜ್ ₹30, ಸಾಂಬಾರಸೌತೆ ₹30, ಹೂಕೋಸು ₹60, ಸೌತೆಕಾಯಿ ₹50, ಬಿಟ್ರೂಟ್ ₹60. ಈರುಳ್ಳಿ ₹20, ಹಾಗಲಕಾಯಿ ₹80, ಬದನೆಕಾಯಿ ₹60, ಮೂಲಂಗಿ ₹60, ಹೀರೆಕಾಯಿ ₹80, ಕ್ಯಾಪ್ಸಿಕಂ ₹80, ಬಟಾಣಿ ₹120, ಸೊರೆಕಾಯಿ ₹60, ಆಲೂಗಡ್ಡೆ ₹30, ನುಗ್ಗೆಕಾಯಿ ₹120, ಶುಂಠಿ ₹300, ನಿಂಬೆ ₹100 ದರ ಇದೆ.
ಸೊಪ್ಪು ದರದಲ್ಲೂ ಏರಿಕೆ: ಸಬ್ಬಸಿಗೆ ಕಟ್ಟಿಗೆ ₹10, ಕೊತ್ತಂಬರಿ ₹10, ಕೆಂಪು ದಂಟು, ಹಸಿರು ದಂಟಿಗೆ ₹10, ಕರಿಬೇವು ಕೆ.ಜಿಗೆ ₹30ರಂತೆ ಮಾರಾಟವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.