ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಯೇನೆಕಲ್ಲು ಗ್ರಾಮದ ಬಚ್ಚನಾಯಕನ ದೈವಸ್ಥಾನದ ಬಳಿ ಮೊಸಳೆಯೊಂದು ಮಂಗಳವಾರ ಕಾಣಿಸಿಕೊಂಡಿದೆ.
ಇಲ್ಲಿನ ಕಲ್ಲಾಜೆ ಹೊಳೆಯ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆ ಬಳಿಕ ಮತ್ತೆ ಹೊಳೆಯತ್ತ ಮರಳಿದೆ. ಈ ವೇಳೆ ಕೆಲ ಬೀದಿನಾಯಿಗಳು ಆ ಮೊಸಳೆಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಈ ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಹೊಳೆ ತುಂಬಿ ಹರಿದಿತ್ತು. ಹೊಳೆಯಲ್ಲಿ ತೇಲಿಬಂದ ಮೊಸಳೆ ದಡಕ್ಕೆ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೊಸಳೆ ಕಾಣಿಸಿಕೊಂಡ ವಿಡಿಯೊವನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.