ಮಂಗಳೂರು: ನಗರದ ಹಲವು ಕಡೆ ಗುರುವಾರ ರಾತ್ರಿ 10 ಗಂಟೆಯಿಂದ ಅನಿಲ ಸೋರಿಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ವಾಸನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.
ನಗರದ ಹಂಪನಕಟ್ಟೆ, ಪಾಂಡೇಶ್ವರ, ರಥಬೀದಿ, ಕುದ್ರೋಳಿ, ಕೊಟ್ಟಾರ, ಬಿಜೈ, ಕದ್ರಿ, ಮಂದಾರಬೈಲ್, ಕೊಂಚಾಡಿ ಸೇರಿದಂತೆ ಹಲವೆಡೆ ಗ್ಯಾಸ್ ಸೋರಿಕೆಯ ವಾಸನೆ ಹರಡಿತ್ತು. ಆದರೆ ಈ ಗ್ಯಾಸ್ ಸೋರಿಕೆಯು ಎಲ್ಲಿಂದ ಆಗಿದೆ ಎಂಬುದು ತಿಳಿದು ಬಂದಿಲ್ಲ. ಹಿರಿಯ ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಮಾಹಿತಿ ನೀಡಿ: ಗ್ಯಾಸ್ ಸೋರಿಕೆಯ ಬಗ್ಗೆ ದೂರುಗಳು ಬಂದಿದ್ದು, ಕೂಡಲೇ ಪೊಲೀಸ್, ಅಗ್ನಿಶಾಮಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಗ್ಯಾಸ್ ಸೋರಿಕೆಯ ಮೂಲದ ಪತ್ತೆಗೆ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಗ್ಯಾಸ್ ಸೋರಿಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಮಾಹಿತಿ ಅಥವಾ ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಯ ಟೋಲ್ ಫ್ರೀ ಸಂಖ್ಯೆ: 1077ಗೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.