ಉಳ್ಳಾಲ: ಭಾರಿ ಮಳೆಯಿಂದಾಗಿ ನೇತ್ರಾವತಿ ನದಿ ತೀರ ಪ್ರದೇಶಗಳ ಮನೆಗಳು ಸೋಮವಾರ ಜಲಾವೃತವಾಗಿದೆ. ಪೆರ್ಮನ್ನೂರು ಗ್ರಾಮದ ಕಲ್ಲಾಪು ವ್ಯಾಪ್ತಿಯಲ್ಲಿ ತೋಡುಗಳ ನೀರು ಮನೆಗಳಿಗೆ ನುಗ್ಗಿದೆ.
ಪೆರ್ಮನ್ನೂರು ಗ್ರಾಮದ ಕಲ್ಲಾಪುವಿನ ಅಲಿಮಮ್ಮ, ಜುಬೈದಾ ಅವರ ಮನೆಗೆ ನೀರು ನುಗ್ಗಿದೆ. ತಹಶೀಲ್ದಾರ್ ಪ್ರಭಾಕರ ಖಜೂರೆ ಸೇರಿದಂತೆ ಅಧಿಕಾರಿಗಳು ಈ ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ತೊಕ್ಕೊಟ್ಟು ಜಂಕ್ಷನ್ನಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ತೊಕ್ಕೊಟ್ಟು ಭುವಿ ಕಾಂಪ್ಲೆಕ್ಸ್ ಬಳಿ ಎಟಿಎಂ ಕೇಂದ್ರಕ್ಕೆ ನೀರು ನುಗ್ಗಿದೆ. ತೊಕ್ಕೊಟ್ಟು ಜಂಕ್ಷನ್ನಲ್ಲಿ ನೀರು ನಿಂತು ಪ್ರಯಾಣಿಕರು ಸಮಸ್ಯೆ ಎದುರಿಸಿದರು.
ಉಳ್ಳಾಲ ಮತ್ತು ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರವೂ ಬಿರುಸುಗೊಂಡಿದ್ದು, ಕಡಲ್ಕೊರೆತ ಹೆಚ್ಚಾಗಿದೆ.ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಮನೆ ಮತ್ತು ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿದೆ.