ಹಲಸು ಸಂಸ್ಕರಣೆಗೆ ಅನುದಾನ: ನಿರ್ಣಯ

ಬಂಟ್ವಾಳ: ‘ ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಅಡಿಕೆ, ತೆಂಗು ಬೆಳೆ ಜೊತೆಗೆ ಹಲಸಿನ ಬೆಳೆಗೂ ಒತ್ತು ನೀಡಬೇಕು’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲ್ಲೂಕಿನ ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಸಂಜೆ ಸಮಾರೋಪಗೊಂಡ ಎರಡು ದಿನಗಳ 'ಅಕಾಲ ಹಲಸು ಸಂಗಮ-2018' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಈ ಹಿಂದೆ ಬಡಜನರ ಆಹಾರ ವಸ್ತುವಾಗಿದ್ದ ಹಲಸು ಪ್ರಸಕ್ತ ಮೌಲ್ಯವರ್ಧನೆಗೊಂಡು ಸಕ್ಕರೆ ಕಾಯಿಲೆ ಇದ್ದವರಿಗೂ ಸವಿಯಲು ಅನುಕೂಲವಾಗುವಂತೆ ವಿಭಿನ್ನ ಮಾದರಿ ತಳಿ ಅಭಿವೃದ್ಧಿಗೊಂಡಿದೆ’ ಎಂದು ರಮಾನಾಥ ರೈ ತಿಳಿಸಿದರು.
ಪುತ್ತೂರು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಹೇಶ ಪುಚ್ಚಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲತಜ್ಞ ಶ್ರೀಪಡ್ರೆ ಅವರ ನೇತೃತ್ವದಲ್ಲಿ ಹಲಸು ಸಂಗಮ, ಹಲಸಿನ ಮೇಳ ಮತ್ತಿತರ ಕಾರ್ಯಕ್ರಮ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಮಿತಿ ಅಧ್ಯಕ್ಷ ಜಿ.ಆನಂದ, ಗೌರವಾಧ್ಯಕ್ಷ ಸುದರ್ಶನ್ ಜೈನ್ ಶುಭ ಹಾರೈಸಿದರು. ಸಮಿತಿ ಸಂಚಾಲಕ ಜಯಾನಂದ ಪೆರಾಜೆ ಸ್ವಾಗತಿಸಿ, ವಂದಿಸಿದರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ನಿವೃತ್ತ ಅರಣ್ಯ ಅಧಿಕಾರಿ ಗ್ಯಾಬಿಯಲ್ ಸ್ಟ್ಯಾನಿ ವೇಗಸ್ ನೇತೃತ್ವದಲ್ಲಿ 'ಹಲಸಿನ ಬಗ್ಗೆ ಮಾತುಕತೆ' ಗೋಷ್ಠಿ ಮತ್ತು ಕಸಾಪ ಬಂಟ್ವಾಳ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮೋಹನ ರಾವ್ ನೇತೃತ್ವದಲ್ಲಿ 'ಕರ್ಣಾರ್ಜುನ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.