ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ಮೇಲಂತಸ್ತಿನಿಂದ ಮೆಟ್ಟಿಲ ಮೂಲಕ ಮೃತದೇಹವನ್ನು ತರುವ ವೇಳೆ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಬೇಕಲ ತಂಬುರಾನ್ ವಳಪ್ ನಿವಾಸಿ ಸುಜಿತ್ ದಾಸ್ ಗಾಯಗೊಂಡವರು.
ಆಸ್ಪತ್ರೆಯ ಲಿಫ್ಟ್ ಕೆಟ್ಟುಹೋಗಿದ್ದ ಬಗ್ಗೆ, 6ನೇ ಮತ್ತು 7ನೇ ಅಂತಸ್ತಿನಿಂದ ಮೃತದೇಹವನ್ನು ಮೆಟ್ಟಿಲ ಮೂಲಕ ಹೊತ್ತುಕೊಂಡು ತರಬೇಕಾದ ಸ್ಥಿತಿ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಬಳಿಕ ಅಧಿಕಾರಿಗಳು ಇನ್ಫ್ರಾ ಎಲವೇಟರ್ ಸಂಸ್ಥೆಗೆ ದುರಸ್ತಿಯ ಜವಾಬ್ದಾರಿ ನೀಡಿದ್ದರು.
20 ದಿನಗಳಲ್ಲಿ ದುರಸ್ತಿ ಪೂರ್ಣಗೊಳಿಸುವ ಭರವಸೆ ನೀಡಿ ಒಂದು ತಿಂಗಳೇ ಕಳೆದಿದೆ. ಆದರೂ ಕಾಮಗಾರಿ ಪೂರ್ಣಗೊಡಿಲ್ಲ. ರ್ಯಾಂಪ್ ವ್ಯವಸ್ಥೆಯೂ ಇಲ್ಲದೆ ಇರುವುದರಿಂದ ರೋಗಿಗಳು, ಅವರ ಸಂಬಂಧಿಕರು, ವೈದ್ಯರು, ಸಿಬ್ಬಂದಿಗೂ ತೊಂದರೆಯಾಗಿದೆ.