ಬದಿಯಡ್ಕ: ಕುಂಟಾರು ಮಹಾವಿಷ್ಣುಮೂರ್ತಿ ಕ್ಷೇತ್ರದ ಆವರಣದಲ್ಲಿ ಗುರುವಾರ ಶ್ರೀಕೃಷ್ಣ ಲೀಲೋತ್ಸವ ನಡೆಯಿತು. ಶ್ರೀಕ್ಷೇತ್ರದ ಮಹಾದ್ವಾರದಿಂದ ಶ್ರೀಕೃಷ್ಣ ವೇಷಧಾರಿ ಬಾಲಕರ ಶೋಭಾಯಾತ್ರೆ ನಡೆಯಿತು.
ಅನಂತರ ಭಕ್ತಿಗೀತೆ, ಮೇಣದ ಬತ್ತಿ ಓಟ ಮತ್ತು ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಲೀಲೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ ಯಂ ಇದ್ದರು. ಬಾಲಕೃಷ್ಣ ಭಟ್ ಸ್ವಾಗತಿಸಿ, ಪುಷ್ಪರಾಜ ವಂದಿಸಿದರು. ಸುನಿಲ್ ಮಾಸ್ಟರ್ ಮತ್ತು ರೇಖಸ್ಮಿತಾ ಟೀಚರ್ ನಿರೂಪಿಸಿದರು.
ಮಣಿಯಂಪಾರೆಯ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಮಮಿ ನಡೆಯಿತು. ನಿವೃತ್ತ ಮುಖ್ಯಶಿಕ್ಷಕ ಕುಂಞಣ್ಣ ಮಾಸ್ತರ್ ನೆಕ್ಕರೆಪದವು ಉದ್ಘಾಟಿಸಿದರು. ಮಂದಿರದ ಕಾಣಿಕೆ ಹುಂಡಿಗಳನ್ನು ಗೋಪಾಲಕೃಷ್ಣ ಭಟ್ ಬಿಡುಗಡೆ ಮಾಡಿದರು. ಆನಂದ ನಾಯ್ಕ ಅರಮಂಗಲ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ಕೃಷ್ಣ ವೇಷ ಸ್ಪರ್ಧೆ, ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದುವು. ಶಿಕ್ಷಕ ಉಣ್ಣಿಕೃಷ್ಣನ್ ಮಾಸ್ತರ್ ಬಹುಮಾನ ವಿತರಿಸಿದರು. ಗೋವಿಂದ ನಾಯ್ಕ ಅರಮಂಗಿಲ, ಆನಂದ ಇದ್ದರು. ಸಂಧ್ಯಾಕುಮಾರಿ ಸ್ವಾಗತಿಸಿ, ಚೈತ್ರ ಅರಮಂಗಿಲ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.
ಸಾಂಸ್ಕೃತಿಕ ವೇದಿಕೆಯಲ್ಲಿ ಮಕ್ಕಳ ನೃತ್ಯ ವೈವಿದ್ಯ, ನವಶಕ್ತಿ ಪ್ರೊಡಕ್ಷನ್ ತಯಾರಿಸಿದ ’ವನಮೋಹಿನಿ’ ಕಿರುಚಿತ್ರ ಹಾಗೂ ವಸಂತ ಎನ್ ಮಣಿಯಂಪಾರೆ ರಚಿಸಿದ ಜಯಚಂದ್ರ ನೀರೋಳ್ಯ ನಿರ್ದೇಶನದ ’ಬದ್ಕ್ ಒಂಜಿ ಕನ’ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಅಡೂರಿನ ಅಯ್ಯಪ್ಪ ಭಜನಾ ಮಂದಿರದಲ್ಲೂ ಮಕ್ಕಳು ಕೃಷ್ಣವೇಷ ಧರಿಸಿ ಸಂಭ್ರಮಿಸಿದರು.