ಮಂಗಳೂರು: ಕಲ್ಕೂರ ಪ್ರತಿಷ್ಠಾನವು ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಕದ್ರಿ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಇದೇ 18ರಂದು 'ರಾಷ್ಟ್ರೀಯ ಮಕ್ಕಳ ಉತ್ಸವ- ಶ್ರೀಕೃಷ್ಣ ವೇಷ ಸ್ಪರ್ಧೆ'ಯನ್ನು ಆಯೋಜಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ‘ನಾಲ್ಕು ದಶಕಗಳಿಂದ ನಡೆಸಿಕೊಂಡು ಬಂದಿರುವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯು ಈ ಬಾರಿ ಆನ್ಲೈಲ್ ಹಾಗೂ ಆಫ್ಲೈನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಬೆಳಿಗ್ಗೆ 9ರಿಂದ ಶ್ರೀಕೃಷ್ಣ ವರ್ಣವೈಭವ, ಶ್ರೀಕೃಷ್ಣ ಗಾನ ವೈಭವ, ಶ್ರೀಕೃಷ್ಣ ರಂಗೋಲಿ ಸ್ಪರ್ಧೆಗಳು ಹಾಗೂ ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1ಕ್ಕೆ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ 12ರ ತನಕ ವಿವಿಧ ಸ್ಪರ್ಧೆಗಳು 9 ವೇದಿಕೆಗಳಲ್ಲಿ ಏಕ ಕಾಲದಲ್ಲಿ ನಡೆಯಲಿವೆ. ರಾತ್ರಿ 12ಕ್ಕೆ ಅರ್ಘ್ಯ ಪ್ರದಾನ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ’ ಎಂದರು.
‘ಪಂಡರಾಪುರ ವಿಠಲ ಎಂಬ ಹೊಸ ವಿಭಾಗ, ಕಂದ ಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀ ಕೃಷ್ಣ, ಗೀತಾಕೃಷ್ಣ ವಿಭಾಗಗಳು ಸೇರಿ ಈ ಸಲ 33 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ತೊಟ್ಟಿಲ ಕೃಷ್ಣವಿಭಾಗದಲ್ಲಿಆರುತಿಂಗಳ ಶಿಶುಗಳಿಗೆಅವಕಾಶಕಲ್ಪಿಸಲಾಗಿದೆ. ಯಕ್ಷಕೃಷ್ಣ ವಿಭಾಗದಲ್ಲಿ ಮಕ್ಕಳು ತೆಂಕು ಅಥವಾ ಬಡಗು ತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ ವೇಷ ಧರಿಸಿ ಭಾಗವಹಿಸಬಹುದು’ ಎಂದರು.
‘ರಾಧಾಕೃಷ್ಣ, ರಾಧಾಮಾಧವ, ಯಶೋದಕೃಷ್ಣ, ಶಂಖನಾದ, ಶಂಖ ಉದ್ಘೋಷ, ದೇವಕಿಕೃಷ್ಣ, ವಸುದೇವ ಕೃಷ್ಣ, ಶ್ರೀಕೃಷ್ಣನ ಕಥಾನಕವನ್ನು ಸಾಮೂಹಿಕವಾಗಿ ಪ್ರದರ್ಶಿಸುವ ನಂದಗೋಕುಲ ಸ್ಪರ್ಧೆಗಳು, ರಸಪ್ರಶ್ನೆಗಳು ನಡೆಯಲಿವೆ. ಭಾಗವಹಿಸುವವರಿಗೆ ವಿಶೇಷ ಬಹುಮಾನಗಳಿವೆ. ಯಾವುದೇ ಪ್ರವೇಶ ಶುಲ್ಕ ಇಲ್ಲ. ಸ್ಥಳದಲ್ಲೇ ಅಥವಾ ಮುಂಚಿತವಾಗಿ ಹೆಸರು ನೋಂದಾಯಿಸಬಹುದು’ ಎಂದರು.
‘ಗೋಪಾಲ ಕೃಷ್ಣ ಸ್ಪರ್ಧೆಗೆ ವೇಷಧಾರಿಯು ಗೋ ಪ್ರೇಮ ತೋರಿಸುವ 3 ನಿಮಿಷದ ವಿಡಿಯೊವನ್ನು kalkuragopalaka2022@gmail.com ಗೆ ಕಳುಹಿಸಬಹುದು. ವೃಕ್ಷ ಕೃಷ್ಣ ಸ್ಪರ್ಧೆಗೆ ಕೃಷ್ಣ ವೇಷಧಾರಿ ಮನೆಯವರೊಂದಿಗೆ ಗಿಡ ನೆಡುವ 3 ನಿಮಿಷದ ವಿಡಿಯೊವನ್ನುkalkuravrikshakrishna2022@gmail.comಗೆ ಕಳುಹಿಸಬಹುದು. ವಿಡಿಯೊ ಎಂಪಿ4 ಫಾರ್ಮಾಟ್ನಲ್ಲಿರಬೇಕು' ಎಂದರು.
ಸುದ್ದಿಗೋಷ್ಠಿಯಲ್ಲಿ ಕದ್ರಿ ನವನೀತ ಶೆಟ್ಟಿ, ಎಂ.ಬಿ.ಪುರಾಣಿಕ್, ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್, ವಿಜಯಲಕ್ಷ್ಮೀ ಶೆಟ್ಟಿ, ಜನಾರ್ಧನ ಹಂದೆ, ದಯಾನಂದ ಕಟೀಲ್ ಹಾಗೂ ಇತರರು ಇದ್ದರು.
ಸಂಪರ್ಕ: 0824-2492239, 9448125949, 9845083736
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.