ಮುಡಿಪು (ದಕ್ಷಿಣ ಕನ್ನಡ): ‘ಅಯೋಧ್ಯೆಯಲ್ಲಿ ಇದೇ 22ರಂದು ಏರ್ಪಡಿಸಿರುವ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭವು ನಮ್ಮ ಸಮಾಜ ಹಾಗೂ ದೇಶವನ್ನು ಒಗ್ಗೂಡಿಸುವ ಹಾಗೂ ದೇಶಕ್ಕೆ ಕೀರ್ತಿ ತರುವ ಸಮಾರಂಭ ಆಗಲಿ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಇಲ್ಲಿಗೆ ಸಮೀಪದ ನರಿಂಗಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿ ಗ್ರಾಮದಲ್ಲೂ ಸೌಹಾರ್ದ, ಸೋದರತ್ವ, ಪ್ರೀತಿ ವಿಶ್ವಾಸ ನೆಲೆಗೊಳ್ಳಲು ಪ್ರೇರಣೆ ಆಗುವ ಕಾರ್ಯಕ್ರಮವಿದು. ಈ ಕಾರ್ಯಕ್ರಮಕ್ಕೆ ಸಂತೋಷದಿಂದ ಶುಭಾಶಯ ಸಲ್ಲಿಸುತ್ತೇನೆ’ ಎಂದರು.
ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ, ‘ಸಮಯಾವಕಾಶ ಸಿಕ್ಕಿದರೆ ಯಾರೂ ಹೋಗಬಹುದು. ಉದ್ಘಾಟನೆ ಸಮಾರಂಭಕ್ಕೆ ಹೋದರೆ ಅದರಲ್ಲಿ ತಪ್ಪಿಲ್ಲ’ ಎಂದರು.