ಬಜಪೆ: 2022ರ ‘ಫೆಮಿನಾ ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡ ಸಿನಿ ಶೆಟ್ಟಿ ಅವರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದರು. ಚೆಂಡೆ ವಾದನ ಸಹಿತ ಅದ್ಧೂರಿಯಾಗಿ ಅವರನ್ನು ಸ್ವಾಗತಿಸಲಾಯಿತು.
ಸೀರೆಯಲ್ಲಿ ಮಿಂಚುತ್ತಿದ್ದ ಸಿನಿ ಶೆಟ್ಟಿ ಅವರಿಗೆ ಹೂಮಾಲೆ ಹಾಕಿ, ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು. ಕುಟುಂಬಸ್ಥರು ಆರತಿ ಬೆಳಗಿದರು.
ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಮುಂಬೈಯಲ್ಲಿಯೇ ಹುಟ್ಟಿ ಬೆಳೆದಿದ್ದು, ‘ಮಿಸ್ ಇಂಡಿಯಾ’ ಕಿರೀಟ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾರೆ.
ತುಳು ಭಾಷೆಯಲ್ಲಿ ಧನ್ಯವಾದ ತಿಳಿಸಿದ ಸಿನಿ ಶೆಟ್ಟಿ, ಮಿಸ್ ವರ್ಲ್ಡ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಒಳ್ಳೆಯ ಚಿತ್ರಕಥೆ ಸಿಕ್ಕಿದರೆ ಸಿನಿಮಾದಲ್ಲಿ ನಟನೆ ಮಾಡುವುದಾಗಿ ಹೇಳಿದ್ದಾರೆ.
ಸಿನಿ ಶೆಟ್ಟಿ ಗೆಳತಿಯರು, ಕುಟುಂಬಸ್ಥರು ಇದ್ದರು. ವಿಮಾನ ನಿಲ್ದಾಣ ಸಿಬ್ಬಂದಿ, ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.