ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪುರುಷೋತ್ತಮನ ಪ್ರಸಂಗ’ ಮಾ.1ರಂದು ತೆರೆಗೆ

ದೇವಿದಾಸ್ ಕಾಪಿಕಾಡ್‌ ನಿರ್ದೇಶನದ ಮೊದಲ ಕನ್ನಡ ಸಿನಿಮಾ
Published 27 ಫೆಬ್ರುವರಿ 2024, 4:45 IST
Last Updated 27 ಫೆಬ್ರುವರಿ 2024, 4:45 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿ ಕುಮಾರ್ ನಿರ್ಮಿಸಿರುವ ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಪುರುಷೋತ್ತಮನ ಪ್ರಸಂಗ’ ಕನ್ನಡ ಸಿನಿಮಾ ಮಾರ್ಚ್‌ 1ರಂದು ರಾಜ್ಯದಾದ್ಯಂತ  ಬಿಡುಗಡೆಗೊಳ್ಳಲಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ದೇವದಾಸ್ ಕಾಪಿಕಾಡ್, ‘ಹಾಸ್ಯ ಕಥಾ ಹಂದರದ ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಪ್ರತಿಯೊಬ್ಬರ ಬದುಕಿನಲ್ಲಿ ನಡೆಯುವ ಸನ್ನಿವೇಶ ಚಿತ್ರದಲ್ಲಿ ಮೂಡಿ ಬಂದಿದೆ. ಹಲವು ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ನಾಯಕನಾಗಿ ಅಜಯ್ ಪೃಥ್ವಿ, ನಾಯಕಿಯರ ಪಾತ್ರಗಳಲ್ಲಿ ರಿಷಿಕಾ ನಾಯ್ಕ, ದೀಪಿಕಾ ದಿನೇಶ್ ನಟಿಸಿದ್ದಾರೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಶೋಭರಾಜ್, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಸಾಯಿಕೃಷ್ಣ ಕುಡ್ಲ ತಾರಾಬಳಗದಲ್ಲಿದ್ದಾರೆ’ ಎಂದರು.

’ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಈಗಾಗಲೇ ಜನಪ್ರಿಯವಾಗಿವೆ. ಜಯಂತ್ ಕಾಯ್ಕಿಣಿ, ಪ್ರೊ.ದೊಡ್ಡರಂಗೇಗೌಡ ಸಾಹಿತ್ಯ ಬರೆದಿದ್ದಾರೆ. ನನ್ನ ರಚನೆಯ ಹಾಡೂ ಇದೆ. ಸತತ 29 ದಿನ ಈ ಸಿನಿಮಾದ ಚಿತ್ರೀಕರಣ ನಡೆಸಿದ್ದೇವೆ. ಬಜಪೆ, ಮುರನಗರ, ಕೆಂಜಾರ್ ಸೇರಿದಂತೆ ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದು, ಅಲ್ಲದೇ ದುಬೈನಲ್ಲಿ ಒಂದು ವಾರ ಚಿತ್ರೀಕರಣ ನಡೆದಿತ್ತು’ ಎಂದು ತಿಳಿಸಿದರು.

ನಿರ್ಮಾಪಕ ವಿ.ರವಿಕುಮಾರ್, ‘ದೇವದಾಸ್ ಕಾಪಿಕಾಡ್ ಅವರು ಕನ್ನಡದಲ್ಲಿ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿದ ಮೊದಲ ಸಿನಿಮಾ ಇದು. ಅವರೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ನೆರವಾಗಿದ್ದಾರೆ. ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್ ಸಹಾಯಕ ನಿರ್ದೇಶಕ ಹಾಗೂ ಅಬೂಬಕರ್ ಪುತ್ತಕ  ಸಹ ನಿರ್ಮಾಪಕರಾಗಿದ್ದಾರೆ. ವಿಷ್ಣು ಅವರ ಛಾಯಾಗ್ರಹಣವಿದ್ದು, ಪುಟ್ಟ ನೆರವಾಗಿದ್ದಾರೆ. ನಕುಲ್ ಅಭಯಂಕರ್ ಅವರು ಸಂಗೀತ ನೀಡಿದ್ದು, ಶರತ್ ಪೂಜಾರಿ ವಸ್ತ್ರವಿನ್ಯಾಸಗೊಳಿಸಿದ್ದಾರೆ. ಸಂದೀಪ್ ಶೆಟ್ಟಿ ಲೈನ್ ಪ್ರೊಡ್ಯುಸರ್, ಪ್ರೊಡಕ್ಷನ್  ತಂಡದಲ್ಲಿ ಸಂತೋಷ್, ರಮಾನಂದ, ಮುನ್ನ, ರಾಜೇಶ್ ಸಹಕರಿಸಿದ್ದಾರೆ’ ಎಂದರು. 

ನಿರ್ಮಾಪಕ ಸಂಶುದ್ದೀನ್, ನಾಯಕ ನಟ ಅಜಯ್ ಪೃಥ್ವಿ, ನಾಯಕಿ ದೀಪಿಕಾ ದಿನೇಶ್, ಅರ್ಜುನ್ ಕಾಪಿಕಾಡ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT