ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಯ ಬದಲಾವಣೆ ದೇಶಕ್ಕೆ ಅಗತ್ಯ: ಮುಕುಂದ

ಪುತ್ತೂರು: ಆರೆಸ್ಸೆಸ್ಸ್ ಕಾರ್ಯಾಲಯ ಉದ್ಘಾಟನೆ; ಸಹ ಸರಕಾರ್ಯವಾಹ ಮುಕುಂದ ಅಭಿಮತ
Last Updated 17 ಜನವರಿ 2023, 3:01 IST
ಅಕ್ಷರ ಗಾತ್ರ

ಪುತ್ತೂರು: ವ್ಯವಸ್ಥೆಯ ಬದಲಾವಣೆ ದೇಶಕ್ಕೆ ಅಗತ್ಯ. ಸಮಾಜದ ಮನಸ್ಥಿತಿ ಬದಲಾಗದಿದ್ದರೆ ವ್ಯವಸ್ಥೆಯ ಬದಲಾವಣೆ ಮತ್ತೆ ಕುಸಿಯಬಹುದು. ಆದ್ದರಿಂದ ಆಳವಾಗಿ ಮತ್ತು ದೀರ್ಘವಾಗಿ ಸಾಮಾಜಿಕ ಪರಿವರ್ತನೆಯ ಕೆಲಸಗಳು ಆಗಬೇಕು. ಇದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಹೇಳಿದರು.

ಕೇಶವಸ್ಮೃತಿ ಸಂವರ್ಧನಾ ಸಮಿತಿಯ ಅಧೀನದಲ್ಲಿ ಪುತ್ತೂರಿನ ಹಳೆ ಪೊಲೀಸ್ ವಸತಿ ನಿಲಯ ರಸ್ತೆಯಲ್ಲಿ ನಿರ್ಮಿಸಿರುವ ಪುತ್ತೂರು ಜಿಲ್ಲೆಯ ಸಂಘದ ಕಾರ್ಯಾಲಯ ‘ಪಂಚವಟಿ' ಉದ್ಘಾಟನೆಯ ನಂತರ ಮಹಾಲಿಂಗೇಶ್ವರ ದೇವಳದ ಎದುರು ಗದ್ದೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ್ ನೀಡಿದರು.

ಕಾಶ್ಮೀರದಲ್ಲಿ 320ನೇ ವಿಧಿಯನ್ನು ತೆಗೆದಿರುವುದು ಸೇರಿದಂತೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯವಸ್ಥೆಯ ಪರಿವರ್ತನೆ ಆಗುತ್ತಿದೆ. ಪರಿವರ್ತನೆಗೆ ಮುಂದಾದ ವೇಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜನರ ಮನಸ್ಸನ್ನೂ ಗೆಲ್ಲಬೇಕಾಗುತ್ತದೆ ಎಂದ ಅವರು ಸಮಾಜದ ವ್ಯವಸ್ಥೆ ಶಿಥಿಲವಾದರೆ ಸಮಾಜವೇ ಕಣ್ಮರೆಯಾಗುತ್ತದೆ ಎಂದರು.

ಸಾವಿರಾರು ಹಳ್ಳಿಗಳಲ್ಲಿ ಇನ್ನೂ ಎಲ್ಲರಿಗೆ ಸಮಾನ ಸ್ಥಾನಮಾನ ಸಿಕ್ಕಿಲ್ಲ. ಮೇಲು ಕೀಳು ತಾರತಮ್ಯ, ಅಸ್ಪೃಶ್ಯತೆ ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ. ದೇವಾಲಗಳಲ್ಲಿ, ಸ್ಮಶಾನಗಳಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ಆತ್ಮವಿಸ್ಮೃತಿ, ಆತ್ಮಕೇಂದ್ರಿತ ವ್ಯಕ್ತಿ ಮತ್ತು ಕುಟುಂಬದ ಚಿಂತನೆ ಮತ್ತು ಸಂಘಟನಾ ಹೀನತೆಯನ್ನು ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದರು.

ಕೇಶವಸ್ಮೃತಿ ಸಂವರ್ಧನ ಸಮಿತಿಯ ಅಧ್ಯಕ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಘ ಚಾಲಕ್ ಡಾ.ಪಿ.ವಾಮನ ಶೆಣೈ ಮತ್ತು ಪಂಚವಟಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ್ ಕೊಡ್ಮಣ್ ಕಾಂತಪ್ಪ ಶೆಟ್ಟಿ ಇದ್ದರು. ಸಹ ಕಾರ್ಯವಾಹ ನವೀನ್ ಪ್ರಸಾದ್ ಕೈಕಾರ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದಲ್ಲಿ ಸಂಘದ ಪಥಸಂಚಲನ ನಡೆಯಿತು. ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್, ಸಚಿವ ಎಸ್. ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT