ಬಂಟ್ವಾಳ: ಕಳೆದ ಚುನಾವಣೆಯಲ್ಲಿ ಅಪಪ್ರಚಾರದ ಮೂಲಕ ನನ್ನನ್ನು ಸೋಲಿಸಿದ್ದ ಬಿಜೆಪಿ ಈ ಬಾರಿ ಅಕ್ರಮ ಮರಳುಗಾರಿಕೆಯ ಹಣ ಚೆಲ್ಲಿ ಸೋಲಿಸಿದೆ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಭರವಸೆಗಳ ಪೈಕಿ ಶೇ 99 ಈಡೇರಿಸಿದ ಹೆಗ್ಗಳಿಕೆಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರದು. ಈ ಬಾರಿ ಗ್ಯಾರಂಟಿ ಕಾರ್ಡ್ನ ಎಲ್ಲ ಭರವಸೆಗಳನ್ನು ಅವರು ಈಡೇರಿಸುತ್ತಾರೆ. ಎಂದರು.
‘ಚುನಾವಣೆ ಕಣದಿಂದ ಮಾತ್ರ ಹಿಂದೆ ಸರಿದಿದ್ದೇನೆ. ರಾಜಕೀಯದಿಂದ ನಿವೃತ್ತಿಗೊಂಡಿಲ್ಲ. ಪಕ್ಷ ಯಾವ ಜವಾಬ್ದಾರಿ ನೀಡಿದರೂ ನಿಷ್ಠೆಯಿಂದ ಪಾಲಿಸುವೆ. ನಾನು ನೈಜ ಕೃಷಿಕ. ಸಮಾಜಸೇವೆಯೇ ಉದ್ಯೋಗ. ಉದ್ಯಮ ಅಥವಾ ಕಮಿಷನ್ ವ್ಯವಹಾರ ಇಲ್ಲ ಎಂದು ಅವರು ಹೇಳಿದರು.