ಮಂಗಳೂರು: ಮರಳು ದಿಬ್ಬಗಳನ್ನು ತೆರವುಗೊಳಿಸಲು ಷರತ್ತುಬದ್ಧ ತಾತ್ಕಾಲಿಕ ಪರವಾನಗಿ ನೀಡಲು 7 ಸದಸ್ಯರ ಜಿಲ್ಲಾ ಸಮಿತಿ ಸಭೆ ನಿರ್ಣಯಿಸಿದೆ.
ಪರವಾನಗಿಗಾಗಿ 318 ಅರ್ಜಿಗಳು ಸ್ವೀಕೃತವಾಗಿದ್ದು, ಮೊದಲ ಹಂತದಲ್ಲಿ 105 ಅರ್ಜಿಗಳನ್ನು ಪರಿಶೀಲನಾ ಸಮಿತಿ ಪರಿಶೀಲಿಸಿದೆ. ಸಮಿತಿ ಶಿಫಾರಸಿನಂತೆ ದಾಖಲೆಗಳು ಸರಿ ಇರುವ 79 ಅರ್ಜಿದಾರರಿಗೆ ಪರವಾನಗಿ ನೀಡಲು ತೀರ್ಮಾನಿಸಿದೆ.
ಮರಳು ದಿಬ್ಬಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಮರಳು ತೆರವು ಮಾಡುವುದನ್ನು ನಿಯಂತ್ರಿಸಲು ಮರಳು ದೋಣಿಗಳಿಗೆ ಹಾಗೂ ಮರಳು ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಹಾಗೂ ಸೂಕ್ತ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಿದೆ.
ಜಿಪಿಎಸ್ ಉಲ್ಲಂಘನೆ ಮಾಡಿದಲ್ಲಿ ಮೊದಲ ಬಾರಿಗೆ ₹25 ಸಾವಿರ, ಎರಡನೇ ಬಾರಿಗೆ ₹ 50 ಸಾವಿರ ದಂಡ ಹಾಗೂ ಮೂರನೇ ಬಾರಿಗೆ ತಾತ್ಕಾಲಿಕ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮರಳು ಸಮಿತಿಯ ತಿಳಿಸಿದೆ.