ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಪದ ಸಂಸ್ಕೃತಿ; ದಾಖಲೀಕರಣ ಮಹತ್ವದ್ದು: ತುಕಾರಾಮ ಪೂಜಾರಿ

‘ಸೂರ್ಯೆ ಚಂದ್ರೆ ಸಿರಿ’ ತುಳು ಕಥೆಗಳ ಸಂಗ್ರಹ ಬಿಡುಗಡೆ
Published 5 ಜನವರಿ 2024, 5:11 IST
Last Updated 5 ಜನವರಿ 2024, 5:11 IST
ಅಕ್ಷರ ಗಾತ್ರ

ಮಂಗಳೂರು: ಜನರ ನಡುವೆ ಬೆಳೆದು ಬಂದ ಜನಪದ ಸಂಸ್ಕೃತಿಯ ಚರಿತ್ರೆ ದಾಖಲೀಕರಣ ಮಹತ್ವದ್ದಾಗಿದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ತುಕಾರಾಮ ಪೂಜಾರಿ ಅಭಿಪ್ರಾಯಪಟ್ಟರು.

ಗುರುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಹಗಾರ ರಘುನಾಥ ಎಂ. ವರ್ಕಾಡಿ ಅವರ ‘ಸೂರ್ಯೆ ಚಂದ್ರೆ ಸಿರಿ’ ತುಳು ಕಥೆಗಳ ಸಂಗ್ರಹವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೃಷಿ ನಂಟಿನೊಂದಿಗೆ ಬದುಕು ರೂಪಿತವಾಗಿದ್ದ ತುಳುನಾಡಿನಲ್ಲಿ ಕೃಷಿ ಸಂಸ್ಕೃತಿ ದೂರವಾಗುತ್ತಿದೆ. ತುಳುನಾಡಿನ ಕೃಷಿ ನಂಬಿಕೆ, ಆರಾಧನಾ ಕ್ರಮಗಳು ಯುವ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ. ಈ ಕಾಲಘಟ್ಟದಲ್ಲಿ ತಮ್ಮ ಅಮ್ಮನಿಂದ ಕೇಳಿ ತಿಳಿದ ನೆಲದ ಸಂಸ್ಕೃತಿಯ ಅನೇಕ ಅಚ್ಚರಿಗಳನ್ನು ಪುಸ್ತಕದಲ್ಲಿ ದಾಖಲಿಸಿರುವ ವರ್ಕಾಡಿ ಅವರ ಶ್ರಮ ಶ್ಲಾಘನೀಯ’ ಎಂದರು.

ಶಾಸನ ಆಧಾರಿತ ಚರಿತ್ರೆಗಳು ರಾಜರ ಆಳ್ವಿಕೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ದಾಖಲಾಗುತ್ತವೆ. ಆದರೆ, ಜನಪದ ಸಂಸ್ಕೃತಿಯ ಚರಿತ್ರೆಗಳು ನೆಲದ ಸಂಸ್ಕೃತಿಯ ಸೊಗಡನ್ನು ಹೊಂದಿರುತ್ತವೆ. ಬಹುಸಂಖ್ಯಾತ ಜನರ ಬದುಕಿನ ಕ್ರಮವಾದ ಜನಪದ ಸಂಸ್ಕೃತಿಯ ದಾಖಲೀಕರಣ ಹೆಚ್ಚು ಮೌಲ್ಯ ಪಡೆದುಕೊಳ್ಳುತ್ತದೆ ಎಂದರು. 

ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ.ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ನಿಲಯ ಎಂ. ಅಗರಿ, ‘ನಮ್ಮ ಕುಡ್ಲ’ ಚಾನೆಲ್‍ನ ನಿರ್ದೇಶಕ ಸುರೇಶ್ ಬಿ. ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು. ಕೃತಿಕಾರ ರಘುನಾಥ ಎಂ. ವರ್ಕಾಡಿ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT