ಸಮ್ಮೇಳನಾಧ್ಯಕ್ಷ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿ ಶುದ್ಧ ಕನ್ನಡ ಪದಗಳ ಬಳಕೆಯೊಂದಿಗೆ ಪದ್ಯ ವಚನ ಸಂಭಾಷಣೆಗಳ ಮೂಲಕ ಯಕ್ಷಗಾನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದೆ. ವ್ಯಾಕರಣಬದ್ಧವಾಗಿ ಸ್ಪಷ್ಟ ಉಚ್ಛಾರದೊಂದಿಗೆ ಪೌರಾಣಿಕ ಕಥೆಗಳ ನಿರೂಪಣೆಯಿಂದಾಗಿ ಜನರಲ್ಲಿಯೂ ಶುದ್ಧ ಪದ ಪ್ರಯೋಗ ಮಾಡುವ ಹವ್ಯಾಸ ಬೆಳೆದಿದೆ. ಯಕ್ಷಗಾನ ಕಲಾವಿದರು ಕಡಿಮೆ ಶಿಕ್ಷಣ ಹೊಂದಿದ್ದರೂ ಅವರ ಭಾಷಾ ಸೊಗಡು ವಾಕ್ಪಟುತ್ವ ಶ್ಲಾಘನೀಯ ಎಂದರು. ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಮನೆ ಮಾತಿನಲ್ಲಿ ಶಾಲೆ– ಕಾಲೇಜುಗಳಲ್ಲಿ ದಿನನಿತ್ಯದ ವ್ಯವಹಾರದಲ್ಲಿ ಮಾಧ್ಯಮಗಳಲ್ಲಿ ಕನ್ನಡವನ್ನೇ ಬಳಸಬೇಕು. ತಂತ್ರಜ್ಞಾನವನ್ನು ದೂರ ಇಡುವ ಬದಲು ಕನ್ನಡದ ಬೆಳವಣಿಗೆಗೆ ಬಳಸಬೇಕು ಎಂದು ಸಲಹೆ ನೀಡಿದರು. ಕನ್ನಡ ಸಾಹಿತ್ಯದ ಬಹುಪಾಲು ಬೇರು ಗ್ರಾಮೀಣ ಬದುಕಿನಲ್ಲಿ ನೆಲೆಗೊಂಡಿದೆ. ಹೊಲ ಮನೆ ಕೃಷಿ ದೇವಾಲಯ ಜಾತ್ರೆಗಳು ದೈವಾರಾಧನೆ ನಾಗಾರಾಧನೆ ಕುಟುಂಬ ಇವುಗಳ ಮಧ್ಯೆ ನಮ್ಮ ಭಾಷೆ ಸಾಹಿತ್ಯ ಬೆಳೆದು ಬಂದಿದೆ. ಅದನ್ನು ಉಳಿಸಿ ಬೆಳೆಸಬೇಕು ಎಂದರು.