ಪಂಚಾಯಿತಿ ವ್ಯಾಪ್ತಿಯ ಸುಮಾರು 300 ಮಹಿಳಾ ಕಾರ್ಮಿಕರು ಆರು ಕಾಯಕ ಸಂಘಗಳನ್ನು ರಚಿಸಿಕೊಂಡು ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದರು. ನಿಯಮದಂತೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದ್ದರು. ಬೇಡಿಕೆ ಸಲ್ಲಿಸಿ 25 ದಿನಗಳು ಉರುಳಿದರೂ ಬೇಡಿಕೆ ಈಡೇರದಿದ್ದಾಗ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಬೈಂದೂರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ’ಕೆಲಸ ಕೊಡಿ, ಇಲ್ಲ ನಿರುದ್ಯೋಗ ಭತ್ಯೆಕೊಡಿ’ ಎಂದು ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ದರು. ಕಾರ್ಯನಿರ್ವಹಣಾಧಿಕಾರಿ ಭಾರತಿ ಅವರು ನರೇಗಾ ಅಡಿ ಕೆಲಸ ಕೊಡುವ ಭರವಸೆ ನೀಡಿದರೂ ಪಟ್ಟುಬಿಡದ ಪ್ರತಿಭಟನಾಕಾರರು, ಲಿಖಿತ ದಾಖಲೆ ಪಡೆದು, ಧರಣಿ ಹಿಂಪಡೆದಿದ್ದರು.