ಮಂಗಳೂರು: ಮಳೆಗಾಲ ಶುರುವಾಗಿದೆ. ಇನ್ನೇನು ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಇದರ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಾಗುತ್ತದೆ. ಪ್ರಮುಖವಾಗಿ ಡೆಂಗಿ, ಮಲೇರಿಯಾ, ಇಲಿಜ್ವರದಂತಹ ಸಾಂಕ್ರಾಮಿಕ ರೋಗ ಗಳು ಹೆಚ್ಚಾಗುತ್ತಿದ್ದು, ಪ್ರತಿ ವರ್ಷ ಆರೋಗ್ಯ ಇಲಾಖೆಯ ನಿದ್ದೆಗೆಡಿಸುತ್ತಿದೆ.
ವಿಪರೀತ ಮಳೆ ಸುರಿಯುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಮಳೆಗಾಲ ಬಂತೆಂ ದರೆ ಸಾಕು, ಸಾಂಕ್ರಾಮಿಕ ರೋಗಗಳ ಆತಂಕ ಶುರುವಾಗುತ್ತದೆ. ಬೇಸಿಗೆಯಲ್ಲಿ ಮಾಯವಾಗಿದ್ದ ಸೊಳ್ಳೆಗಳು ಮತ್ತೆ ಆರ್ಭಟ ಶುರು ಮಾಡುತ್ತಿದ್ದು, ಸಣ್ಣ ಜ್ವರ ಬಂದರೂ, ಜನರ ನೆಮ್ಮದಿ ಹಾಳು ಮಾಡುತ್ತದೆ.
ಪರಿಸರ ನೈರ್ಮಲ್ಯ ಕಾಪಾಡುವುದ ಕ್ಕಾಗಿಯೇ ಸ್ವಚ್ಛತಾ ಅಭಿಯಾನಗಳು ನಡೆಯುತ್ತಲೇ ಇದ್ದರೂ, ಜಿಲ್ಲೆಯಲ್ಲಿ ಮಾತ್ರ ಸಾಂಕ್ರಾಮಿಕ ರೋಗಗಳ ಭೀತಿ ತಪ್ಪುತ್ತಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಒಟ್ಟು 20 ಡೆಂಗಿ, 13 ಇಲಿ ಜ್ವರ ಹಾಗೂ 788 ಮಲೇರಿಯಾ ಪ್ರಕರಣ ದಾಖಲಾಗಿದೆ.
ಮಳೆಗಾಲ ಶುರುವಾಯಿತೆಂದರೆ ಜಿಲ್ಲೆಯಲ್ಲಿಯೂ ಒಂದಲ್ಲ ಒಂದು ರೀತಿ ಯ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿ ದರೂ, ಆರೋಗ್ಯ ಇಲಾಖೆ ಎಷ್ಟೇ ಶ್ರಮಿಸಿದರೂ ರೋಗಬಾಧೆ ತಪ್ಪುತ್ತಿಲ್ಲ. ಕಳೆದ ವರ್ಷ ಡೆಂಗಿ ಜ್ವರದಿಂದಾಗಿ ಪುತ್ತೂರು ತಾಲ್ಲೂಕಿನಲ್ಲಿ ಇಬ್ಬರು ಹಾಗೂ ಬೆಳ್ತಂಗಡಿಯಲ್ಲಿ ಒಬ್ಬರು ಸೇರಿ ಒಟ್ಟು ಮೂವರು ಮೃತಪಟ್ಟಿದ್ದರು.
ಈಗ ಮತ್ತೆ ಮಳೆಗಾಲ ಪ್ರಾರಂಭವಾ ಗಿದ್ದು, ಅಲ್ಲಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾ ಮಿಕ ರೋಗ ಹರಡಿದ ಅನಂತರ ಚಿಕಿ ತ್ಸೆಗೆ ಹೋಗುವ ಬದಲು ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಉತ್ತಮ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಎಚ್ಚರಿಕೆ ಅಗತ್ಯ: ಡೆಂಗಿ, ಮಲೇರಿ ಯಾದಂತಹ ಸಾಂಕ್ರಾಮಿಕ ರೋಗಗ ಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊ ಳ್ಳುತ್ತಿದೆ. ಮನೆಯ ಬಾವಿಗಳಿಗೆ ಗಪ್ಪಿ ಮೀನುಗಳನ್ನು ಬಿಡುವುದು, ಸಾಂಕ್ರಾ ಮಿಕ ರೋಗನಾಶಕ ಔಷಧ ಸಿಂಪಡಣೆ ಮಾಡುವುದು ಈ ಬಾರಿಯೂ ನಡೆಯು ತ್ತಿದೆ. ಆದಾಗ್ಯೂ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆಯೊಂದಿಗೆ ಸಾರ್ವ ಜನಿಕರ ಜವಾಬ್ದಾರಿಯೂ ಮುಖ್ಯವಾಗಿದೆ.
ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಎಲ್ಲ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಮುಖ್ಯವಾಗಿ ತ್ಯಾಜ್ಯ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಳ್ಳಿಗಳಲ್ಲಿ ಅಡಿಕೆ ಹಾಳೆಗಳಲ್ಲಿ ನೀರು ನಿಂತು, ಸೊಳ್ಳೆ ಗಳ ಉತ್ಪತ್ತಿಯಾಗುತ್ತದೆ. ಇದೇ ಡೆಂಗಿಗೆ ಕಾರಣವಾಗುತ್ತದೆ. ಹಾಗಾಗಿ ಅಡಿಕೆ ಹಾಳೆಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಗಮನ ಹರಿಸಬೇಕು. ಹೂವಿನ ಕುಂಡ ಗಳಲ್ಲಿಯೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನಿಯಮಿತ ದ್ರವ ಆಹಾರ ಸೇವಿಸಿ: ಜ್ವರ ಬರುವುದು, ಕಣ್ಣಿನ ಹಿಂಭಾಗ ನೋವು, ತಲೆನೋವು, ಸಂದಿನೋವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಡೆಂಗಿ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ, ನಿರ್ಲಕ್ಷ್ಯ ವಹಿಸಿದರೆ ಅಪಾ ಯವಾಗುತ್ತದೆ. ಆರಂಭಿಕ ಹಂತದ ಲ್ಲಿಯೇ ಯಾವುದೇ ಜ್ವರವನ್ನೂ ನಿರ್ಲಕ್ಷಿ ಸದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
ನಗರದಲ್ಲಿ ಇರುವ ರಕ್ತ ಪರೀಕ್ಷಾ ಕೇಂದ್ರಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ದ್ರವಾಂಶ ಇರುವ ಆಹಾರ ಸೇವನೆ ಅತಿ ಅವಶ್ಯವಾಗಿದೆ. ಆಹಾರ ಸೇವನೆ ಬಳಿಕ ವಾಂತಿ ಯಾಗುತ್ತದೆ ಎಂದು ತಿನ್ನದೇ ಇದ್ದರೆ ಅಪಾಯ. ಗಂಜಿ ಊಟ, ದ್ರವಾಹಾರ ಸೇವನೆ ನಿರಂತರ ಮಾಡುತ್ತಿರಬೇಕು ಎಂದು ಆರೋಗ್ಯ ಇಲಾಖೆ ಅಧಿ ಕಾರಿಗಳು ಹೇಳುತ್ತಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ಪ್ರಕರಣ
ವರ್ಷ ರೋಗಿಗಳ ಸಂಖ್ಯೆ ಗುಣಮುಖ
2015 11,021 11,021
2016 11,037 11,037
2017 1,792 1,792
(ಮೇ ಅಂತ್ಯದವರೆಗೆ)
ಮಲೇರಿಯಾ ನಿಯಂತ್ರಣಕ್ಕೆ ಪಾಲಿಕೆ ಖರ್ಚು (₹ಗಳಲ್ಲಿ)
ವರ್ಷ ವೆಚ್ಚ
2015 82,19,309
2016 86,95,608
2017 40,05,065
* *
ಯಾವುದೇ ರೀತಿಯ ಜ್ವರ ಕಾಣಿಸಿಕೊಂಡಲ್ಲಿ, ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು
ಕವಿತಾ ಸನಿಲ್
ಮೇಯರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.