ಬ್ರಹ್ಮಾವರ: ಕಳೆದ ಆರು ತಿಂಗಳಿನಿಂದ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೇ, ಪಂಪ್ಗಳು ಕೆಲಸ ನಿರ್ವಹಿಸದೇ ಇರುವುದರಿಂದ ನೀಲಾವರ ಸಮೀಪದ ಬಾವಲಿಕುದ್ರುವಿನ ತೆಂಗಿನ ಮರಗಳು ಒಣಗುತ್ತಿವೆ.
ಬ್ರಹ್ಮಾವರ ಹೆಬ್ರಿ ರಾಜಮಾರ್ಗದಿಂದ 8 ಕಿ.ಮೀ ದೂರದಲ್ಲಿರುವ ನೀಲಾವರಕ್ಕೆ ಸಾಗುವ ಮಾರ್ಗದಲ್ಲಿ ಸಿಗುವ ಬಾವಲಿಕುದ್ರುವಿನಲ್ಲಿ ಒಟ್ಟು 23 ಕ್ರೈಸ್ತ ಕುಟುಂಬಗಳು ನೆಲೆಸಿವೆ. ಸುಮಾರು 85 ಎಕರೆ ವಿಸ್ತೀರ್ಣ ಜಾಗದಲ್ಲಿ ಸಾವಿರಾರು ಫಲಭರಿತ ತೆಂಗಿನ ಮರಗಳು ಇದ್ದು, ಕೆಲವು ತಿಂಗಳುಗಳಿಂದ ಇಲ್ಲಿನ ತೋಟ ನೀರು ಕಾಣದೇ ಒಣಗುವ ಸ್ಥಿತಿಗೆ ಬಂದಿವೆ.
1960-70ರಲ್ಲಿ ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತ್ತಿತ್ತು. ಐದಾರು ಕುಟುಂಬಗಳು ಪಂಪ್ ಅಳವಡಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತ್ದ್ದಿದರು. ಒಂದು ವರ್ಷದಿಂದ ಇಲ್ಲಿ ಅಸರ್ಮಕ ವಿದ್ಯುತ್ ಪೂರೈಕೆಯಾಗಿ ಪಂಪ್ಗಳು ಕೆಲಸ ನಿರ್ವಹಿಸುತ್ತಿಲ್ಲ. ಅನೇಕ ಬಾರಿ ಬ್ರಹ್ಮಾವರ ಮೆಸ್ಕಾಂ ಕಚೇರಿಗೆ ಮನವಿ ಮಾಡಿಕೊಂಡಿದ್ದು, ಇನ್ನೂ ಕೂಡಾ ಇಲ್ಲಿಯ ಜನರ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.
ಜುಲೈಯಿಂದ ತಂತಿಗಳು ನದಿಯ ನೀರಿನಲ್ಲಿ ತೇಲುತ್ತಿದ್ದರೂ ಅದನ್ನು ತೆಗೆಯುವ ಗೋಜಿಗೆ ಮೆಸ್ಕಾಂ ಅಧಿಕಾರಿಗಳು ಮುಂದಾಗಿಲ್ಲ. ನೀರಿನಲ್ಲಿ ಮುಳುಗಿರುವ ತಂತಿಯ ಕಾರಣ ದೋಣಿಗಳ ಮೂಲಕ ಹೋಗಲು ತೊಂದರೆ ಆಗುತ್ತಿದೆ. ನಾಲ್ಕು ತಂತಿಗಳ ಪೈಕಿ ಒಂದು ತುಂಡಾಗಿ ಬಿದ್ದಿದ್ದರೂ ಅದರ ಜೋಡಣೆಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಕಾಡು ಪ್ರದೇಶ, ಮರಗಿಡಗಳು ಸಾಕಷ್ಟಿವೆ ಎಂಬ ಕಾರಣ ನೀಡಿ ಇನ್ನೂ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಬದಲಿ ವ್ಯವಸ್ಥೆ : ಗ್ರಾಮಸ್ಥರು ಅನೇಕ ಬಾರಿ ಬದಲಿ ವ್ಯವಸ್ಥೆ ಮಾಡುವಂತೆ ಮೆಸ್ಕಾಂನ್ನು ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಬದಲಿ ವ್ಯವಸ್ಥೆಗೆ ಎಲ್ಲಾ ತಯಾರಿ ಮಾಡಿದ್ದರು. ಆದರೆ ಸ್ಥಳೀಯ ನಿವಾಸಿಯೊಬ್ಬರ ತಡೆಯಿಂದ ಸಂಪರ್ಕ ಇದುವರೆಗೆ ಇಲ್ಲಿನ ಜನತೆಗೆ ಸಿಕ್ಕಿಲ್ಲ. ಸಮಸ್ಯೆಗೆ ಪರಿಹಾರ ಸಿಗುವ ತನಕ ಹಳೆಯ ತಂತಿಗಳಿಂದಲೇ ಇಲ್ಲಿನ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ನೀಡಿ ತಮ್ಮ ಕೃಷಿ ಚಟುವಟಿಕೆಗೆಗೆ ಚಾಲನೆ ನೀಡಲು ಮೆಸ್ಕಾಂ ಅಧಿಕಾರಿಗಳು ಗಮನಹರಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.