ಮಂಗಳೂರು: ರಾಜ್ಯದಲ್ಲಿ ಅಂಗವಿಕಲರ ಸಮೀಕ್ಷೆ ಹಾಗೂ ಪೂರ್ಣ ಮಾಹಿತಿ ಪಡೆಯಲು ರಾಜ್ಯ ಅಂಗವಿಕಲರ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಡಿಸೆಂಬರ್ ವೇಳೆಗೆ ಈ ಕಾರ್ಯಕ್ಕೆ ಚಾಲನೆ ದೊರಕುವ ನಿರೀಕ್ಷೆ ಇದೆ.
ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಪರಿಸರ ವ್ಯಾಪ್ತಿಯಲ್ಲಿ ಅಂಗವಿಕಲತೆಗೆ ಒಳಗಾದ ಸಂತ್ರಸ್ತರ ತಾತ್ಕಾಲಿಕ ಪಾಲನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ.ರಾಜಣ್ಣ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ 9.4 ಲಕ್ಷ ಅಂಗವಿಕಲರಿದ್ದರು. ರಾಜ್ಯದ ಜನಸಂಖ್ಯೆಯ ಶೇ 3ರಷ್ಟು ಅಂಗವಿಕಲರು ಇದ್ದಾರೆ. ಈಗ ಅವರ ಸಂಖ್ಯೆ 13.8 ಲಕ್ಷ ಇರಬಹುದು. ಅವರ ಸ್ಪಷ್ಟ ಅಂಕಿ-ಅಂಶ, ಮಾಹಿತಿ, ಸ್ಥಿತಿಗತಿ ಅರಿಯಲು ಸಮೀಕ್ಷೆ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯಿಂದ ನಕಲಿ ಅಂಗವಿಕಲರು ಬೆಳಕಿಗೆ ಬರಲಿದ್ದಾರೆ. ಅವರಿಗೆ ತಾತ್ಕಾಲಿಕವಾಗಿ ಸ್ಮಾರ್ಟ್ ಕಾರ್ಡ್ ಕೊಡಬೇಕು ಎಂದು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಈ ಸಮೀಕ್ಷೆ ನಡೆಯುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಬಿಬಿಎಂಪಿ ಅನುದಾನದಲ್ಲಿ ಶೇ 3ರಷ್ಟು (12 ಕೋಟಿ) ಅನುದಾನ ಮೀಸಲಿಡಲಾಗಿದ್ದು, ತುಂಬಾ ಕೆಲಸ ಮಾಡುವ ಅವಕಾಶ ಇದೆ.
ಅವರು ಸಮೀಕ್ಷೆ ನಡೆಸಲು ಮುಂದೆ ಬಂದಿದ್ದಾತರೆ. ಇದೇ 25ರಂದು ಬಿಬಿಎಂಪಿಯಲ್ಲಿ ಸಭೆ ನಡೆಯಲಿದ್ದು, ಮುಂದಿನ ತಿಂಗಳು ಈ ಸಮೀಕ್ಷೆ ಆರಂಭಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಎಲ್ಲಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ರೂ 9 ಕೋಟಿ ಅನುದಾನ ಕೇಳಿದ್ದೇವೆ. ಸಚಿವ ಸಿ.ಸಿ.ಪಾಟೀಲ್, ಜಗದೀಶ ಶೆಟ್ಟರ್ ಒಪ್ಪಿದ್ದಾರೆ. ಸಚಿವ ಸಂಪುಟವೂ ಒಪ್ಪುವ ನಿರೀಕ್ಷೆ ಇದೆ. ಜಿಲ್ಲೆಯಲ್ಲೂ ಶೇ 3ರಷ್ಟು ಅನುದಾನ ಇದ್ದು, ಜಿಲ್ಲಾ ಮಟ್ಟದಲ್ಲಿ ಈ ಅನುದಾನ ಬಳಸಿಕೊಂಡು ಮಾಹಿತಿ ಕಲೆ ಹಾಕಲಾಗುವುದು. ಸಾಫ್ಟ್ವೇರ್ನಲ್ಲಿ ಈ ಎಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಅವರು ವಿವರಿಸಿದರು.