ಮಂಗಳೂರು: ದೇರಳಕಟ್ಟೆ ಯೇನೆ ಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಿರಿಯ ವೈದ್ಯರ ಮೇಲೆ ಹಾಗೂ ಹಿರಿಯ ಶುಶ್ರೂಷಕಿ ಫ್ಲಾರೆನ್ಸ್ ಅವರನ್ನು ಥಳಿಸಿ ಅಲ್ಲಿಯೇ ಅವರನ್ನು ತಳ್ಳಿ ಹಾಕಲಾಗಿದೆ.
ವೈದ್ಯರನ್ನು ಅಪಹರಿಸಿ, ಹಲ್ಲೆ ಮಾಡಿ ನೇತ್ರಾವತಿ ನದಿಗೆ ಹಾಕುವುದಕ್ಕೆ ಯತ್ನಿಸಿದ ಘಟನೆ ಖಂಡಿಸಿ ಇದೇ 22ರಂದು ಬೆಳಿಗ್ಗೆ 6 ಗಂಟೆಯಿಂದ ತುರ್ತು ಸೇವೆ ಹೊರತುಪಡಿಸಿದಂತೆ ಉಳಿದ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಭಾರ ತೀಯ ವೈದ್ಯಕೀಯ ಸಂಘದ ನಿಯೋ ಜಿತ ಅಧ್ಯಕ್ಷ ಡಾ. ಕೆ.ಆರ್. ಕಾಮತ್ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಧುಮೇಹ ಕಾಯಿಲೆ ಉಲ್ಬಣಗೊಂಡು ಗಂಭೀರ ಸ್ಥಿತಿಯಲ್ಲಿ ಇದ್ದ 65 ವರ್ಷದ ರೋಗಿ ಸಾವನ್ನಪ್ಪಿರುವ ಸುದ್ದಿ ತಿಳಿಸಲು ಬಂದ ವೈದ್ಯರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಘಟನೆಯನ್ನು ತಡೆಯಲು ಮುಂದಾದ ಶುಶ್ರೂಷಕಿ ಮೇಲೆ ಕೂಡಾ ಹಲ್ಲೆ ಮಾಡಲಾಗಿದೆ. ಇಂತಹ ಗುಂಡಾ ವರ್ತನೆ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ನರರೋಗ ತಜ್ಞ ದಿವಾಕರ ರಾವ್ ಮಾತನಾಡಿ, ‘ಮಂಗಳೂರಿನಲ್ಲಿ ಇಂತಹ ಕೃತ್ಯ ನಡೆದಿರುವುದು ವೈದ್ಯರಲ್ಲಿ ಭಯದ ವಾತಾವರಣ ಮೂಡಿಸಿದೆ. ವೈದ್ಯರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಬೆಳೆಯಬೇಕು. ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಯಾವುದೇ ತುರ್ತು ಸೇವೆಗಳು ನಿಲ್ಲುವುದಿಲ್ಲ. ಹೊರ ರೋಗಿಗಳ ತಪಾಸಣೆ (ಒಪಿಡಿ) ಸೌಲಭ್ಯ ಇರುವುದಿಲ್ಲ’ ಎಂದು ತಿಳಿಸಿದರು.
ವೈದ್ಯರಾದ ಆನಂತರಾವ್ ಪ್ರಸಾದ್, ವಿಕ್ರಮ್ ಶೆಟ್ಟಿ, ಅಜ್ಮಲ್, ಗುರುಪ್ರಸಾದ್ ಭಟ್, ಸುಧೀರ್ ಹೆಗ್ಡೆ, ಸತೀಶ್ ಭಟ್, ಡಾ. ಇರ್ಫಾನ್, ಸಂತೋಷ ಸೋನ್ಸ, ಭರತ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.