ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

57 ಕೆರೆ ಯೋಜನೆ ಕಾಂಗ್ರೆಸ್ ಸರ್ಕಾರದ ಸಾಧನೆ: ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್
Published 16 ಏಪ್ರಿಲ್ 2024, 5:24 IST
Last Updated 16 ಏಪ್ರಿಲ್ 2024, 5:24 IST
ಅಕ್ಷರ ಗಾತ್ರ

ಜಗಳೂರು: ಪಟ್ಟಣದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಬರಪೀಡಿತ ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಬಜೆಟ್ ನಲ್ಲಿ ಸೇರ್ಪಡೆಗೊಳಿಸಿದ್ದರಿಂದ ಈ ಭಾಗದ ನೀರಾವರಿ ಕನಸು ನನಸಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ರೋಡ್ ಶೋ ನಂತರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘57 ಕೆರೆ ಯೋಜನೆ ಪರಿಣಾಮ ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಈಗಾಗಲೇ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. 22 ಕೆರೆ ಯೋಜನೆ ಕಳಪೆ ಕಾಮಗಾರಿಯ ಕಾರಣ ಸಫಲವಾಗಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದಲ್ಲಿ ಇಡೀ ತಾಲ್ಲೂಕು ಸಮಗ್ರ ನೀರಾವರಿಯಾಗಲಿದೆ. ಶಾಸಕ ಬಿ. ದೇವೇಂದ್ರಪ್ಪ ಅವರೊಂದಿಗೆ ಸೇರಿ ಸಮಗ್ರ ನೀರಾವರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಾಸಕ. ಬಿ. ದೇವೇಂದ್ರಪ್ಪ ಮಾತನಾಡಿ, ‘ಕಾಂಗ್ರೆಸ್ ಪಕ್ಷದಿಂದ ಈ ಭಾರಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಮರ್ಥ ಅಭ್ಯರ್ಥಿಯಾಗಿದ್ದು, ಜಗಳೂರು ವಿಧಾನ ಸಭಾ ಕ್ಷೇತ್ರದಿಂದ ಕನಿಷ್ಟ 25 ಸಾವಿರ ಮತಗಳ ಲೀಡ್ ಪಡೆಯಲಿದ್ದಾರೆ’ ಎಂದರು.

‘ಬಿಜೆಪಿ ಕ್ಯಾನ್ಸರ್ ಇದ್ದಂತೆ. ಬುಡ ಸಮೇತ ಬಿದ್ದು ಹೋಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಪ್ರಾಮಾಣಿಕ ಕಾರ್ಯಕರ್ತರ ಮೇಲೆ ದರ್ಪ, ದೌರ್ಜನ್ಯ ನಡೆಸುತ್ತಿದ್ದು, ಅದನ್ನು ಪ್ರತಿಭಟಿಸಿ ಆತ್ಮ ಸಂತೋಷದಿಂದ ನಾನು ಹಾಗೂ ನನ್ನ ತಂದೆ ಟಿ. ಗುರುಸಿದ್ದನಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ತವರು ಮನೆಗೆ ಬಂದಷ್ಟು ಸಂತಸವಾಗುತ್ತಿದೆ’ ಎಂದು ಡಾ. ಟಿ.ಜಿ ರವಿಕುಮಾರ್ ಹೇಳಿದರು.

ಬಿಜೆಪಿ ಮುಖಂಡರಾದ ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಕೆಚ್ಚೇನಹಳ್ಳಿ ಸಿದ್ದೇಶ್ ಮುಂತಾದವರು ಇಲ್ಲಿನ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಮಾಜಿ ಶಾಸಕ ಟಿ. ಗುರುಸಿದ್ದನಗೌಡ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್.ಟಿ. ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ ಪಟೇಲ್, ಷಂಷೀರ್ ಅಹ್ಮದ್, ಮಂಜುನಾಥ್, ಸುರೇಶ್ ಗೌಡ ಇದ್ದರು.

‘ಹೈಕಮಾ‌ಡ್ ಸಮೀಕ್ಷೆಯನ್ವಯ ಪ್ರಭಾಗೆ ಟಿಕೆಟ್’

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವಂತೆ ಮಾಜಿ ಸಂಸದ ಚನ್ನಯ್ಯ ಒಡೆಯರ್ ಅವರ ಪುತ್ರ ಉದಯ ಶಂಕರ್ ಒಡೆಯರ್ ಹಾಗೂ ಹೊನ್ನಾಳಿಯ ಎಚ್.ಬಿ.‌ ಮಂಜಪ್ಪ ಅವರಿಗೆ ಕೇಳಿಕೊಂಡೆ. ಆದರೆ ಬೇರೆ ಬೇರೆ ಕಾರಣಗಳಿಗೆ ಅವರ‍್ಯಾರು ಸ್ಪರ್ಧೆಗೆ ಒಪ್ಪಲಿಲ್ಲ. ಟಿಕೆಟ್ ಕೊಡುವಂತೆ ವಿನಯ್ ಕುಮಾರ್ ನನಗೆ ಕೇಳಿದರು. ನಮ್ಮ ಜಿಲ್ಲೆಯವರೇ ಇರುವಾಗ ಹೊರ ಜಿಲ್ಲೆಯವರಿಗೆ ಹೇಗೆ ಕೊಡಲು ಆಗುತ್ತದೆ ಅಂತಾ ಹೇಳಿದೆ. ನಮ್ಮ ಜಿಲ್ಲೆಯಲ್ಲಿ ಸಮರ್ಥ ವ್ಯಕ್ತಿಗಳಿಲ್ಲವೇ. ಹೈಕಮಾಂಡ್ ಸರ್ವೇ ಮಾಡಿ ಡಾ. ಪ್ರಭಾ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದರಿಂದ ಕೊನೆಗೆ ಒಪ್ಪಿದ್ದು ಎಲ್ಲರೂ ಒಮ್ಮತದಿಂದ ಸಹಕಾರ ನೀಡಿ ಗೆಲ್ಲಿಸಿ’ ಎಂದು ಮಲ್ಲಿಕಾರ್ಜುನ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT