ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಕಷ್ಟ ಇದ್ದವರು ಬನ್ನಿ ಪೆಟ್ರೋಲ್ ಹಾಕಿಸುವೆ ಎಂದು ಉಡಾಫೆಯ ಉತ್ತರವನ್ನು ಸಂಸದರು ನೀಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ದ್ವಿಚಕ್ರ ವಾಹನಗಳೊಂದಿಗೆ ಸಂಸದರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.
ಇಂಧನ ಬೆಲೆ ಏರಿಕೆಯಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಜೀವನ ನಡೆಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಸಂಸದರು ತಮ್ಮ ಹೇಳಿಕೆಯಂತೆ ನಡೆದುಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ. ಶೆಟ್ಟಿ ‘ದೇಶ ಕೊರೊನಾದಿಂದ ತತ್ತರಿಸುತ್ತಿದೆ. ಇಂಥ ಸಂದರ್ಭದಲ್ಲಿ ಸಂಸದರು ಉಡಾಫೆ ಮಾತುಗಳಿಂದ ಬಡವರನ್ನು ಅವಮಾನಿಸುತ್ತಿದ್ದಾರೆ. ಸಂಸದರು ಕಷ್ಟದಲ್ಲಿರುವವರಿಗೆ ಪೆಟ್ರೋಲ್ ಹಾಕಿಸದಿದ್ದರೆ ಮುಂದಿನ ದಿನಗಳಲ್ಲಿ ಅವರು ಭಾಗವಹಿಸುವ ಸಮಾರಂಭಗಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸೈಯದ್ ಖಾಲಿದ್, ಬಸವಪಟ್ಟಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಮಾತನಾಡಿದರು. ರಂಜಿತ್, ವಿನಯ್, ಜಿಕ್ರಿಯ ಫಾಹಿಮ್, ನವೀನ್, ಪವನ್, ಮೊಹಮದ್ ಬಾಷಾ, ಫರ್ಗನ್, ರಾಜ, ಮಾರುತಿ, ತಿಪ್ಪೇಶ್ ಅವರೂ ಇದ್ದರು.