ಹರಿಹರ: ತಾಲ್ಲೂಕಿನ ಕಸಬಾ ಹೋಬಳಿಯ ಕೊಂಡಜ್ಜಿ ಸಮೀಪದ ಹೊಟಗೇನಹಳ್ಳಿಯ ಹಿರೇಬಿದರಿ ಪರಶುರಾಮಪ್ಪ ಅವರು ತಮ್ಮ ಜಮೀನಿನಲ್ಲಿ ವಿಭಿನ್ನ ಬೆಳೆಗಳನ್ನು ಬೆಳೆದು ಆರ್ಥಿಕ ಸಬಲತೆ ಸಾಧಿಸಿದ್ದಾರೆ.
ತಮಗಿರುವ 4 ಎಕರೆ ಜಮೀನಿನ ಪೈಕಿ ತಲಾ ಒಂದು ಎಕರೆಯಲ್ಲಿ ಅಡಿಕೆ, ಶೇಂಗಾ, ಈರುಳ್ಳಿ ಮತ್ತು ಡ್ರ್ಯಾಗನ್ ಹಣ್ಣಿನ ಬೆಳೆ ಬೆಳೆದಿದ್ದಾರೆ. ಜೊತೆಗೆ ಮೀನಿನ ಹೊಂಡ, ಎರೆಹುಳು ಗೊಬ್ಬರ ತಯಾರಿಕೆ, ಎತ್ತು, ಹಸು, ಕುರಿ, ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ.
ಒಂದೇ ಬೆಳೆ ಬೆಳೆದ ರೈತರು ಕೆಲವು ಬಾರಿ ಉತ್ತಮ ವರಮಾನ ಪಡೆದರೆ, ಹಲವು ಬಾರಿ ನಷ್ಟಕ್ಕೆ ಈಡಾಗುತ್ತಾರೆ. ಆದರೆ, ಪರಶುರಾಮ ಅವರು ಮಾತ್ರ ವರ್ಷ ಪೂರ್ತಿ ಒಂದಲ್ಲ ಒಂದು ಬೆಳೆಯಿಂದ ಆದಾಯವನ್ನು ಗಳಿಸುತ್ತಲೇ ಇರುತ್ತಾರೆ. ಇವರ ಈ ವಿಭಿನ್ನ ಹಾಗೂ ಸುರಕ್ಷಿತ ಆದಾಯ ಗಳಿಕೆಯನ್ನು ಗಮನಿಸಿ ಕೃಷಿ ಇಲಾಖೆ 2020-21ನೇ ಸಾಲಿನಲ್ಲಿ ತಾಲ್ಲೂಕಿನ ‘ಅತ್ಯುತ್ತಮ ರೈತ’ ಎಂಬ ಪ್ರಶಸ್ತಿ ನೀಡಿ ಸತ್ಕರಿಸಿದೆ. ವಿಭಿನ್ನ ಬೆಳೆಗಳನ್ನು ಬೆಳೆಯುವುದರ ಜತೆಗೆ ಮೀನುಗಾರಿಕೆ, ಹೈನುಗಾರಿಕೆಯಿಂದಾಗಿ ಪರಶುರಾಮಪ್ಪ ಅವರು ಆರ್ಥಿಕ ಸಬಲತೆ ಸಾಧಿಸಿರುವುದರಿಂದ ಗೊಬ್ಬರ, ಕೀಟನಾಶಕ, ನೀರಾವರಿ ಯೋಜನೆಗಾಗಿ ಬ್ಯಾಂಕ್ ಸಾಲವನ್ನು ಅವಲಂಭಿಸಿಲ್ಲ.
ಕುಟುಂಬದ ಸದಸ್ಯರೂ ಕೃಷಿ ಕಾರ್ಯದಲ್ಲಿ ಸಾಧ್ಯವಾದಷ್ಟು ಕೈಜೋಡಿಸುತ್ತಿರುವುದು ಪರಶುರಾಮಪ್ಪ ಅವರಿಗೆ ಆನೆ ಬಲ ಸಿಕ್ಕಂತಾಗಿದೆ. ‘ಆಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ, ಸಾಗದು ಕೆಲಸವು ಮುಂದೆ’... ಎಂಬ ಬಂಗಾರದ ಮನುಷ್ಯ ಚಲನಚಿತ್ರದ ಹಾಡು ಪರಶುರಾಮಪ್ಪ ಅವರಿಗೆ ಹೆಚ್ಚು ಅನ್ವಯವಾಗುತ್ತದೆ.