ಶಿರಾಳಕೊಪ್ಪ: ಸಮೀಪದ ಕರ್ನಲ್ಲಿ ಗ್ರಾಮದಲ್ಲಿ ರಾಷ್ಟ್ರಕೂಟರ ಅವಧಿಯ ಹಲವಾರು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಊರನಕಟ್ಟೆ ಬಳಿಯ ಜಮೀನಿನಲ್ಲಿ ಹತ್ತು ಹಾಗೂ ಅದೇ ಗ್ರಾಮದ ಕಲ್ಕಟ್ಟೆಯಲ್ಲಿ ನಾಲ್ಕು ಗೋಸಾಸ ಕಲ್ಲುಗಳು, 8ನೇ ಶತಮಾನಕ್ಕೆ ಸೇರಿದ ಗಜಲಕ್ಷ್ಮಿ ಫಲಕ ಮತ್ತು ಕೋಣನತಲೆ ಶಿಲ್ಪವನ್ನು ಇತಿಹಾಸ ಸಂಶೋಧಕ ರಮೇಶ ಬಿ ಹಿರೇಜಂಬೂರ ಅವರು ಶೋಧಿಸಿದ್ದಾರೆ.
ಊರನಕಟ್ಟೆ ಬಳಿಯ ಜಮೀನಿನಲ್ಲಿ ಒಂಬತ್ತು ಗೋಸಾಸ ಕಲ್ಲುಗಳನ್ನು ಮೂರರ ಒಂದು ಸಾಲಿನಂತೆ ಮೂರು ಸಾಲುಗಳಲ್ಲಿ ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ. ಒಂದು ಗೋಸಾಸಕಲ್ಲು ಅಲ್ಪ ಚದುರಿದೆ. ಈ ಗೋಸಾಸ ಕಲ್ಲುಗಳ ಗಾತ್ರವು ಬೇರೆ ಬೇರೆಯಾಗಿದ್ದು ಒಂದು ಬೃಹತ್ ಗಾತ್ರವನ್ನು ಹೊಂದಿದೆ. ಇದು 140 ಸೆಂ.ಮೀ. ಉದ್ದ 90 ಸೆಂ.ಮೀ. ಅಗಲ ಹಾಗೂ 40 ಸೆಂ.ಮೀ. ದಪ್ಪ ಗಾತ್ರ ಹೊಂದಿದೆ.
ಇವುಗಳಲ್ಲಿ ಆನೆ, ಗೋವು ಮತ್ತು ಹಂಸಗಳ ಕೆತ್ತನೆಗಳನ್ನು ಕಾಣಬಹುದು. ಎರಡು ಗೋಸಾಸ ಕಲ್ಲುಗಳಲ್ಲಿ ಒಂದೊಂದು ಪದ ಕೆತ್ತಲ್ಪಟ್ಟಿವೆ.
‘ಸ್ವಸ್ತಿಶ್ರೀ ಚಡಪುಲಿ’ ಮತ್ತು ‘ಮೊಕಮ್ಳಲ್ದ’ ಎಂಬ ಪದಗಳು ಗೋವುಗಳನ್ನು ದಾನ ನೀಡಿದ ವ್ಯಕ್ತಿಗಳ ಹೆಸರುಗಳಾಗಿರುವ ಸಾಧ್ಯತೆಗಳಿವೆ. ಸಮೀಪದ ಮುತ್ತಳ್ಳಿಯೊಂದರಲ್ಲೇ ಮೂವತ್ತು ಗೋಸಾಸಕಲ್ಲುಗಳಿವೆ. ಇವುಗಳ ಜೊತೆ ಕರ್ನಲ್ಲಿ ಗ್ರಾಮದಲ್ಲಿ 9ನೇ ಶತಮಾನಕ್ಕೆ ಸೇರಿದ ಕೋಣನ ತಲೆ ಶಿಲ್ಪ ಮತ್ತು ಗಜಲಕ್ಷ್ಮಿ ಫಲಕಗಳನ್ನೂ ಗುರುತಿಸಲಾಗಿದೆ.
ಈ ಕಾರ್ಯಕ್ಕೆ ಗ್ರಾಮದ ಕೋಟೆಪ್ಪ, ಕೆಇಬಿ ಹರೀಶ್, ಮಂಜಪ್ಪ ಚುರ್ಚಿಗುಂಡಿ ಸಹಕಾರ ನೀಡಿದ್ದಾರೆ.