ದಾವಣಗೆರೆ: ರಾಜ್ಯ ಪುನರ್ವಿಂಗಡನೆಕಾಯ್ದೆ ಆದ ಮೇಲೆ, ಆರ್ಟಿಕಲ್ 3 ರಚನೆ ಆದ ಮೇಲೆ ಮಹಾರಾಷ್ಟ್ರದವರು ಬೆಳಗಾವಿಗಾಗಿ 2004ರಲ್ಲಿ ದಾವೆ ಹೂಡಿದ್ದರು. ಅದನ್ನು ಸಂವಿಧಾನ ಬದ್ಧವಾಗಿ ನಿರ್ವಹಿಸಿಲ್ಲ ಎಂಬುದಕ್ಕೆ ಒತ್ತು ನೀಡಿ ನಾವು ವಾದ ಮಾಡುತ್ತಿದ್ದೇವೆ. ಕರ್ನಾಟಕದ ಯಾವುದೇ ಭಾಗದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಈ ಬಗ್ಗೆ ವಾದ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಿದ್ದೇವೆ. ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರನ್ನು ಕೂಡ ನೇಮಕ ಮಾಡಿದ್ದೇವೆ. ನಾವು ಸಂವಿಧಾನಬದ್ಧವಾಗಿ, ಕಾನೂನು ಬದ್ಧವಾಗಿ ಇರುವುದರಿಂದ ಯಾವುದೇ ಸಮಸ್ಯೆಯಾಗದು’ ಎಂದು ವಿವರಿಸಿದರು.
‘ಮುಂದಿನ ವಾರ ಸರ್ವಪಕ್ಷದ ಸಭೆ ಕರೆದಿದ್ದೇನೆ. ಯಾವ ವಿಚಾರವನ್ನು ನಾವು ಪ್ರತಿಪಾದಿಸಬೇಕು ಎಂದು ಸರ್ವಪಕ್ಷಗಳ ಸಭೆ ಮತ್ತು ಕಾನೂನು ತಜ್ಞರ ಜತೆಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ಬೆಳಗಾವಿ ಪೂರ್ತಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಿತ್ತಿರುವ ಶರದ್ ಪವಾರ್ ಇದೇ ವಿಚಾರದಲ್ಲಿಯೇ ರಾಜಕೀಯವನ್ನು ಮಾಡುತ್ತಾ ಬಂದವರು. ಅವರ ಕನಸು ಇಲ್ಲಿವರೆಗೆ ಈಡೇರಿಲ್ಲ. ಮುಂದೆಯೂ ಈಡೇರುವುದಿಲ್ಲ ಎಂದರು.