ದಾವಣಗೆರೆ: ‘ಗೋಹತ್ಯೆ ನಿಷೇಧ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸಂಪುಟ ಸಭೆ ಮಾಡಿ ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
‘ಮಹಾರಾಷ್ಟ್ರಕ್ಕಾಗಿ ಮರಾಠ ಅಭಿವೃದ್ಧಿ ನಿಗಮ ಮಾಡಿಲ್ಲ. ಕರ್ನಾಟಕದ ಎಲ್ಲ ಕಡೆ ಮರಾಠ ಸಮುದಾಯದವರು ಇದ್ದಾರೆ. ಅವರ ಅಭಿವೃದ್ಧಿಗಾಗಿ ಮಾಡಲಾಗಿದೆ. ಇದರಿಂದ ಕನ್ನಡ ಭಾಷೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ’ ಎಂದು ಸಮರ್ಥಿಸಿಕೊಂಡರು.
ಸಚಿವ ಸಂಪುಟ ವಿಸ್ತರಣೆ ಸಹಿತ ಎಲ್ಲ ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿರುವುದು. ಹೈಕಮಾಂಡ್ ಮತ್ತು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ತಿಳಿಸಿದರು.
‘ಶಾಸಕರು ನನ್ನ ಬಳಿ ಕೂಡ ಅವರ ಕೆಲಸಕ್ಕೆ ಬರುತ್ತಾರೆ. ಬಂದ ಕೂಡಲೇ ಪರ್ಯಾಯ ನಾಯಕತ್ವ ಎಂದು ತಿಳಿಯಲು ಸಾಧ್ಯವೇ? ಅದೇ ರೀತಿ ರಮೇಶ್ ಜಾರಕಿಹೊಳಿ ಬಳಿಯೂ ಹೋಗಿದ್ದಾರೆ. ಅದರ ಬಗ್ಗೆ ತಪ್ಪು ತಿಳಿಯುವಂಥದ್ದೇನಿಲ್ಲ’ ಎಂದರು.
‘ದಾವಣಗೆರೆ ರಾಜ್ಯದ ಹೃದಯಭಾಗದಲ್ಲಿ ಇರುವುದರಿಂದ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನಾನೇ ಒತ್ತಾಯ ಮಾಡಿದ್ದೇನೆ’ ಎಂದು ತಿಳಿಸಿದರು.