ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಮಳೆಹಾನಿಗೊಳಗಾದ ಪ್ರಾಥಮಿಕ ವರದಿ ತುರ್ತಾಗಿ ತಯಾರಿಸಿ ಈ ದಿನವೇ ಕಳುಹಿಸುವಂತೆ ತಹಶೀಲ್ದಾರ್ ಡಾ. ಅಶ್ವತ್ಥ ಎಂ.ಬಿ. ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗುರುವಾರ ತಾಕೀತು ಮಾಡಿದರು.
ಕುಂಬಳೂರು, ಕೊಕ್ಕನೂರು, ಭಾಸ್ಕರ್ ರಾವ್ ಕ್ಯಾಂಪಿನ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿದರು. 2-3 ದಿನಗಳ ಕೃಷಿ, ತೋಟಗಾರಿಕೆ ಅಧಿಕಾರಿಗ ಳೊಂದಿಗೆ ಬೆಳೆ ಹಾನಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು. ಕಳೆದೆರಡು ದಿನಗಳಿಂದ ಸುರಿದ ಬಿರುಗಾಳಿ ಮಳೆಗೆ ಈಗಾಗಲೇ ಒಂದೂವರೆ ಸಾವಿರ ಎಕರೆಗೂ ಹೆಚ್ಚು ಪ್ರದೇಶದ ಕಟಾವಿಗೆ ಸಿದ್ಧವಾಗುತ್ತಿದ್ದ ಭತ್ತದ ಬೆಳೆ, ಅಡಿಕೆ, ತೆಂಗು, ಬಾಳೆ ಬೆಳೆ ಹಾಳಾಗಿದೆ.
‘ಹವಾಮಾನ ಇಲಾಖೆ ವರದಿಯಂತೆ ಇನ್ನೂ 2-3 ದಿನ ಮಳೆ ಸುರಿಯುವ ಸಾಧ್ಯ ಇದೆ. ಜನತೆ ಜಾಗ್ರತೆಯಿಂದಿರಿ. ಅನಗತ್ಯವಾಗಿ ಮನೆಯಿಂದ ಸುತ್ತಾಡಬೇಡಿ. ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ನದಿಪಾತ್ರದ ಜನತೆ ಜನಜಾನುವಾರು ಬಿಡಬೇಡಿ’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ರೈತರು ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ ಕೊಡಿಸಲು ಕೋರಿದಾಗ, ‘ಬೆಳೆಹಾನಿ ವರದಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಮಾರ್ಗಸೂಚಿಯಂತೆ ಹಾಗೂ ಬೆಳೆ ವಿಮೆ ಮಾಡಿಸಿದವರಿಗೂ ಕೂಡ ನಿಯಮಗಳಂತೆ ಪರಿಹಾರ ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು.
ಮಲೇಬೆನ್ನೂರು ಸಮೀಪದ ಭಾನುವಳ್ಳಿ ಗ್ರಾಮದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಉಕ್ಕಡಗಾತ್ರಿ- ನಂದಿಗುಡಿ ಸಂಪರ್ಕ ಕಡಿತವಾಗಿದೆ. ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾನುವಳ್ಳಿ ಸಂಪರ್ಕಿಸಲು ರಾಮತೀರ್ಥದ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ಉಪತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಸಮೀರ್ ಅಹ್ಮದ್, ಹೇಮಂತ್, ಗ್ರಾಮ ಲೆಕ್ಕಾಧಿಕಾರಿಗಳಾದ ಸುಭಾನಿ, ಶ್ರೀಧರಮೂರ್ತಿ, ದೇವರಾಜ್, ಕೊಟ್ರೇಶ್, ಬೋರಯ್ಯ, ಗ್ರಾಮ ಸಹಾಯಕರಾದ ಮಾರುತಿ, ದೇವರಾಜ್, ರೈತರು ಇದ್ದರು.