ದಾವಣಗೆರೆ:ಕೊರೊನಾ ವಾರಿಯರ್ಗಳ ಸೇವೆ ಶ್ಲಾಘನೀಯ. ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸೇರಿ ಎಲ್ಲರೂ ಕೊರೊನಾ ತಡೆಗೆ ಶ್ರಮಿಸುತ್ತಿರುವುದು ಮಾದರಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ದೊಡ್ಡಪೇಟೆ ನಾಮದೇವ ಭಜನಾ ಮಂದಿರದಲ್ಲಿ ಶನಿವಾರ ನಾಮದೇವ ಸಿಂಪಿ ಸಮಾಜ ದೈವ ಮಂಡಳಿಯಿಂದ ಕೊರೊನಾ ವಾರಿಯರ್ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
‘ಜಿಲ್ಲೆಯಲ್ಲಿ ಆರಂಭದಲ್ಲಿಯೇ ನನ್ನ ಮಗಳಿಗೆ ಕೊರೊನಾ ಸೋಂಕು ಬಂದಾಗ ಆತಂಕಕ್ಕೆ ಒಳಗಾಗಿದ್ದೆವು. ಆದರೆ ಜಿಲ್ಲಾಡಳಿತ, ವೈದ್ಯರು ಸೇರಿ ಎಲ್ಲರೂ ನಮ್ಮ ಆತಂಕ ನಿವಾರಿಸಿ, ಮಗಳನ್ನು ಗುಣಮುಖರನ್ನಾಗಿಸಿದರು ಎಂದು ಸ್ಮರಿಸಿದ ಅವರು, ಶೀಘ್ರ ಜಿಲ್ಲೆಯನ್ನು ಸೋಂಕು ಮುಕ್ತವಾಗಿಸಲೂ ಎಲ್ಲರೂ ಕೈ ಜೋಡಿಸೋಣ’ ಎಂದು ಮನವಿ ಮಾಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸೋಂಕು ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಕ್ರಮಗಳ ಮೂಲಕ ಸೋಂಕು ನಿಯಂತ್ರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ನಾಮದೇವ ಸಿಂಪಿ ಸಮಾಜ ದೈವ ಮಂಡಳಿಯ ಅಧ್ಯಕ್ಷ ಜಗನ್ನಾಥ್ ಎಸ್. ಗಂಜಿಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜ್ಞಾನದೇವ ಬೊಂಗಾಳೆ, ಕೆ.ಬಿ. ಶಂಕರನಾರಾಯಣ ಇದ್ದರು.