ದಾವಣಗೆರೆ: ‘ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸಹಕಾರ ನೀಡುತ್ತಿರುವುದು ಪ್ರಶಂಸನೀಯ. ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಅನ್ನುವುದು ಮುಖ್ಯವಲ್ಲ. ನಮ್ಮ ಸಂಪಾದನೆಯನ್ನು ಹೇಗೆ ಸದ್ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯ’ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್.ಜಿ. ಅವರಗೆರೆ ಉಮೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ಚಿಕ್ಕನಹಳ್ಳಿ ಹೊಸ ಬಡಾವಣೆಯ ಶ್ರೀ ಸರ್ವಜ್ಞ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಸಮವಸ್ತ್ರ ಹಾಗೂ ಊಟದ ತಟ್ಟೆಗಳನ್ನು ವಿತರಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಹಾಗೂ ಕಾರ್ಮಿಕ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಶಾಲೆಯನ್ನು ಆಯ್ಕೆಮಾಡಿರುವುದು ಉತ್ತಮ ನಿರ್ಧಾರ ಎಂದರು.
ಶಿಕ್ಷಣ ಪಡೆಯುವುದು ಎಲ್ಲರ ಮೂಲಭೂತ ಹಕ್ಕು. ಅದೇ ರೀತಿ ಬ್ಯಾಂಕ್ ಸೌಲಭ್ಯಗಳನ್ನು ಪಡೆಯುವುದು ಕೂಡ ನಾಗರಿಕರ ಹಕ್ಕಾಗಬೇಕು ಎನ್ನುವ ನಿಟ್ಟಿನಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಹೋರಾಡುತ್ತಿದೆ. ಅದರ ಅಂಗ ಸಂಸ್ಥೆಯಾದ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸಹ ಅದೇ ರೀತಿ ಸಾಮಾಜಿಕ ಸೇವೆಗಳನ್ನು ಮಾಡುತ್ತಿದೆ ಎಂದು ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಜಿ. ದೊಡ್ಡಮನಿ ಹೇಳಿದರು.
‘ಸಂಘವು 1951 ರಲ್ಲಿ ಉದಯವಾಯಿತು. 2001 ರಲ್ಲಿ ಸಂಘವು ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ಸದಸ್ಯರ ರಕ್ಷಣೆಗಾಗಿ, ಹಿತಕ್ಕಾಗಿ, ಸೌಲಭ್ಯಕ್ಕಾಗಿ ಹೋರಾಡುವುದರ ಜೊತೆಗೆ ಸಮಾಜದಲ್ಲಿ ಕಷ್ಟದಲ್ಲಿ ಇರುವ ಸಂಘ-ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಸಹಾಯ ಮಾಡುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ನಿರ್ಧರಿಸಲಾಯಿತು. ಈ ಪ್ರಕಾರವಾಗಿ 2001 ರಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮ ಎನ್ನುವ ಪರಿಕಲ್ಪನೆಯೊಂದಿಗೆ ದೇಶದಾದ್ಯಂತ ಆಯ್ದ ಸ್ಥಳಗಳಲ್ಲಿ ವರ್ಷಕ್ಕೆ ₹ 50 ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ’ ಎಂದುಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ರಾಜ್ಯ ಸಹ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ತಿಳಿಸಿದರು.
ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಊಟದ ತಟ್ಟೆ ಮತ್ತು ಸಿಹಿ ವಿತರಣೆ ಮಾಡಲಾಯಿತು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಚಂದ್ರಶೇಖರ್, ಮುಖ್ಯ ಶಿಕ್ಷಕ ಆರ್.ಎಂ. ಸುರೇಶ್, ಶಿಕ್ಷಕರಾದ ಕೆ.ಸಿದ್ದನಗೌಡ, ಎಂ.ಆರ್. ಜಗದೀಶ್ ಹಾಗೂ ಸಿಬ್ಬಂದಿ ಕೆ.ಪದ್ಮಾವತಿ, ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ಪದಾಧಿಕಾರಿಗಳಾದ ಕೆ.ವಿಶ್ವನಾಥ್ ಬಿಲ್ಲವ, ಆರ್. ಆಂಜನೇಯ, ಪರಶುರಾಮ, ಕಾಡಜ್ಜಿ ಎನ್. ವೀರಪ್ಪ, ಸುರೇಶ್ ಚೌಹಾಣ್, ಪವನಕುಮಾರ್ ಗೌಡ, ಎಂ.ಎಂ.ಸಿದ್ದವೀರಯ್ಯ, ವಿ.ಆರ್.ಹರೀಶ್, ಎಂ. ಸತೀಶ್, ಜ್ಞಾನೇಶ್ವರ ಮಾಲವಾಡೆ, ರಮೇಶ್, ಎಚ್. ವಿನಯ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.