ದಾವಣಗೆರೆ: ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಮಣ್ಣಿನ ಮೂರ್ತಿಯನ್ನು ತ್ಯಜಿಸಿ ಪರಿಸರಕ್ಕೆ ಪೂರಕವಾಗಿರುವ ಜೇಡಿಮಣ್ಣಿನ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಪ್ರಚಾರ ನಡೆಸುತ್ತಿದೆ.
‘ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನ ಮೂರ್ತಿಗಳನ್ನು ತಯಾರಿಸುವವರ ವಿರುದ್ಧ ಸೂಕ್ತ ಕ್ರಮ ಎರಡು ತಿಂಗಳ ಹಿಂದೆಯೇ ಎಲ್ಲಾ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಪಂಚಾಯಿತಿ, ನಗರಪಾಲಿಕೆಗಳಿಗೆ ಪತ್ರ ಬರೆಯಲಾಗಿದೆ. ಮಾಹಿತಿ ಎಲ್ಲರಿಗೂ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಸಿಡಿಯಲ್ಲಿ ಧ್ವನಿಮುದ್ರಿಸಿ ನಗರದ ವಿವಿಧೆಡೆ ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು’ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಣ್ಣರಹಿತ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಿ, ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಯನ್ನು ತಿರಸ್ಕರಿಸಿ ಎಂದು ಸಾರ್ವಜನಿಕ ಸ್ಥಳಗಳು, ಶಾಲಾ–ಕಾಲೇಜುಗಳು ಹಾಗೂ ಸ್ತ್ರೀಶಕ್ತಿ ಸಂಘಗಳು ಇರುವ ಜಾಗದಲ್ಲಿ 12 ದಿವಸದಿಂದ ಪ್ರಚಾರ ಮಾಡಲಾಗುತ್ತಿದೆ’ ಎಂದು ಹೇಳುತ್ತಾರೆ.
‘ಧ್ವನಿ ಮುದ್ರಿಕೆಯಲ್ಲಿ ಗಣೇಶನ ಹಾಡುಗಳ ಜೊತೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸುವುದರಿಂದ ಪರಿಸರಕ್ಕೆ ಹಾನಿಯಾಗುವುದರ ಬಗ್ಗೆ ತಿಳಿಸಲಾಗುವುದು. ಪಿಒಪಿ ಮೂರ್ತಿಗಳ ಮಾರಾಟಗಾರರಿಗೆ ದಂಡ ವಿಧಿಸುವುದು ಒಂದು ಬಗೆಯಾದರೆ ಸಾರ್ವಜನಿಕರ ಮನವೊಲಿಸುವುದು ಮತ್ತೊಂದು ಮಾರ್ಗ. ಆದ್ದರಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದರು.
‘ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಮೂರ್ತಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದ್ದು, ಅವುಗಳು ಎಲ್ಲಿಯಾದರೂ ಮಾರಾಟ ಮಾಡಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986 ಅಡಿಯಲ್ಲಿ ಅವುಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದಾಗಿವೆ’ ಎಂದು ಕೊಟ್ರೇಶ್ ಹೇಳುತ್ತಾರೆ.
ಅಧಿಕಾರಿಗಳ ತಂಡ ರಚನೆ:
ಜಿಲ್ಲೆಯಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ತಯಾರಿಸುವುದನ್ನು ನಿಯಂತ್ರಿಸಲು ಹಾಗೂ ಡಿಜೆ ಸೌಂಡ್ ಸಿಸ್ಟಂ ಬಳಕೆಯನ್ನು ನಿಯಂತ್ರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಐವರು ಅಧಿಕಾರಿಗಳ ತಂಡವನ್ನು ರಚನೆ ಮಾಡಿದೆ. ಅಲ್ಲದೇ ಇವರು ಶಬ್ಧ ಮಾಪನ ಕಾರ್ಯವನ್ನು ಮಾಡುತ್ತಾರೆ.
ಬಾಕ್ಸ್
ಶಬ್ಧ ಮಾಪನಾ ಕಾರ್ಯಕ್ಕೆ ಈ ಅಧಿಕಾರಿಗಳನ್ನು ಸಂಪರ್ಕಿಸಿ
ಅಧಿಕಾರಿಗಳು→ದೂರವಾಣಿ ಸಂಖ್ಯೆ
ಉಪ ಪರಿಸರ ಅಧಿಕಾರಿ ಎಸ್.ಸಿ. ಸುರೇಶ್→9448758967
ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯರಾವ್ ಎಸ್.→9880714342
ಕ್ಷೇತ್ರ ಸಹಾಯಕ ಡಿ.ಲಿಂಗರಾಜು→9945393401
ಕ್ಷೇತ್ರ ಸಹಾಯಕ ಎಂ. ಜಾಕೀರ್ ಹುಸೇನ್→9739192005
ಕ್ಷೇತ್ರ ಸಹಾಯಕ ಬಸವರಾಜ→9741429666
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.