ಹೊನ್ನಾಳಿ: ಬರದ ಛಾಯೆಯಿಂದಾಗಿ ರೈತರು ತತ್ತರಿಸಿ ಹೋಗಿದ್ದು, 7 ತಾಸು ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಶಾಸಕ ಡಿ.ಜಿ.ಶಾಂತನಗೌಡ ಮನೆ ಎದುರು ಸೋಮವಾರ ಧರಣಿ ನಡೆಸಿದರು.
ರಾಜ್ಯದಲ್ಲಿ ಬರ ಘೋಷಣೆಯಾದರೂ ಅವಳಿ ತಾಲ್ಲೂಕಿನಲ್ಲಿ ಪರಿಹಾರ ಕಾರ್ಯ ಇನ್ನೂ ಕೈಗೊಂಡಿಲ್ಲ. ರೈತರು ಕಟ್ಟಿರುವ ಬೆಳೆವಿಮೆ ಬಂದಿಲ್ಲ. ಶಾಸಕರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ಬಸಪ್ಪ ಆಗ್ರಹಿಸಿದರು.
ಪಂಪ್ಸೆಟ್ ಹೊಂದಿದ ರೈತರಿಗೆ ಸರ್ಮಪಕವಾಗಿ ವಿದ್ಯುತ್ ನೀಡುತ್ತಿಲ್ಲ. ನಿರಂತರವಾಗಿ ವಿದ್ಯುತ್ ಪೂರೈಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
15 ದಿನಗಳ ಒಳಗೆ ಬಗರಹುಕುಂ ಕಮಿಟಿ ರಚಿಸಬೇಕು. ಅವಳಿ ತಾಲ್ಲೂಕಿನಿಂದ ತಲಾ ಒಬ್ಬ ಸಮಿತಿಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ಮಳೆಯೇ ಆಗದ ಕಾರಣ ಬರದ ಛಾಯೆ ಮೂಡಿದೆ. ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಉತ್ಪಾದನೆ ಕಡಿಮೆಯಾಗಿದೆ. ವಿದ್ಯುತ್ ಹಂಚಿಕೆ ಸಮಯ ಮತ್ತು ಸಾಲಮನ್ನಾ ವಿಚಾರ ಸರ್ಕಾರದ ಮಟ್ಟದಲ್ಲಿ ತಿರ್ಮಾನವಾಗಬೇಕು. ಬೆಳೆವಿಮೆ ಹಣದ ವಿಚಾರ ಇನ್ಶೂರೆನ್ಸ್ ಕಂಪನಿಗಳಿಂದ ಇತ್ಯರ್ಥವಾಗಬೇಕು. ನಾನೂ ಪ್ರಯತ್ನ ಮಾಡುತ್ತೇನೆ’ ಎಂದರು.
ಬೆಸ್ಕಾಂ ಎಇಇ ಜಯಪ್ಪ, ಶ್ರೀನಿವಾಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.