ದಾವಣಗೆರೆ: ಗುರು ಮತ್ತು ವಿರಕ್ತ ಪರಂಪರೆಯನ್ನು ವೀರಶೈವ ಲಿಂಗಾಯತ ಸಮಾಜದ ಎರಡು ಕಣ್ಣುಗಳು ಎಂದು ಅನ್ನದಾನೀಶ್ವರ ಸ್ವಾಮೀಜಿ ಕಂಡಿದ್ದರು ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ನಿಂದ ದೇವರಾಜ ಅರಸು ಬಡಾವಣೆ ‘ಬಿ’ ಬ್ಲಾಕ್ನಲ್ಲಿರುವ ಅನ್ನದಾನೀಶ್ವರ ಶಾಖಾ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನವ ಅನ್ನದಾನ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಮಹಾಮಠದ ಜತೆಗೆ 30 ಶಾಖಾ ಮಠಗಳನ್ನು ಸ್ಥಾಪಿಸುವ ಮೂಲಕ ವಿದ್ಯೆ, ಅನ್ನಪ್ರಸಾದ ನೀಡಿದವರು. ಹಾನಗಲ್ ಶಿವಯೋಗ ಮಂದಿರದ ಮೂಲಕ ಅನೇಕ ಸ್ವಾಮೀಜಿಗಳನ್ನು ನೀಡಿದವರು. ಧ್ವನಿ ಇಲ್ಲದವರಿಗೆ ಧ್ವನಿಯಾದವರು. ರೈತರಿಗೆ ಪುನರ್ ಚೈತನ್ಯ ನೀಡಲು ಶ್ರಮಿಸಿದವರು. ಅವರ ಬದುಕೇ ಚೈತನ್ಯದ ಬೆಳಕು ಎಂದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಬಸವ ಪುರಾಣವನ್ನು ಆರಂಭಿಸಿದವರು ಅನ್ನದಾನೀಶ್ವರ ಸ್ವಾಮೀಜಿ. ಒಂದೇ ಕಡೆ ಪ್ರವಚನ ಇರಬಾರದು ಎಂಬ ಕಾರಣಕ್ಕೆ ಪ್ರತಿ ದಿನ ಒಂದೊಂದು ಊರಿನಲ್ಲಿ ಪ್ರವಚನ ನಡೆಸಲು ನಿರ್ಧರಿಸಿ ಸಂಚಾರ ಬಸವ ಪುರಾಣವನ್ನು ಸ್ಥಾಪಿಸಿದರು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು’ ಎಂದರು.
ಶಿಕ್ಷಕ ಮಹಾಂತೇಶ್ ಶಾಸ್ತ್ರಿ ಉಪನ್ಯಾಸ ನೀಡಿದರು. ಶ್ರೀಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ.ಎಚ್.ಎಂ. ಶಿವಕುಮಾರಸ್ವಾಮಿ ಕಾರ್ಯಕ್ರಮ ನೀಡಿದರು. ಡಾ.ಎಚ್.ಬಿ. ಶಿವಕುಮಾರ್, ಎನ್. ಅಡಿವೆಪ್ಪ, ಓಂಕಾರಪ್ಪ ಇದ್ದರು. ವೀರಪ್ಪ ಬಾವಿ, ತನುಜಾ ಕಾರ್ಯಕ್ರಮ ನಡೆಸಿಕೊಟ್ಟರು.