ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಗಲಿನಲ್ಲಿ ಭಾರಿ ಸರಕು ವಾಹನ ನಿಷೇಧಕ್ಕೆ ಚಿಂತನೆ

ನಗರದ ಹಳೆ ಭಾಗದ 6 ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಕ್ರಮ
Last Updated 27 ಜುಲೈ 2021, 15:04 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಹಳೇ ಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳಿರುವ ಆರು ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಭಾರಿ ಸರಕು ವಾಹನಗಳ ಪ್ರವೇಶಗಳ ಸಂಚಾರವನ್ನು ನಿಷೇಧಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ಸರಕು ವಾಹನಗಳ ಪ್ರವೇಶ ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಡಿಪೇಟೆ ರಸ್ತೆ, ಮಹಾವೀರ ರಸ್ತೆ, ಎಕ್ಸ್‌ ಮುನ್ಸಿಪಲ್‌ ರಸ್ತೆ, ಎನ್.ಆರ್ ರಸ್ತೆ, ಹಳೇ ಬೇತೂರು ರಸ್ತೆ ಹಾಗೂ ಬೂದಿಹಾಳ್‌ ರಸ್ತೆಗಳು ಕಿರಿದಾಗಿವೆ. ಇಲ್ಲಿನ 30 ಅಡಿ ರಸ್ತೆಗಳನ್ನು 120 ಅಡಿ ರಸ್ತೆಯನ್ನಾಗಿ ವಿಸ್ತರಿಸಲು ಸಾಧ್ಯವಿಲ್ಲ. ಈ ರಸ್ತೆಗಳು ರಾಜ್ಯ ಹೆದ್ದಾರಿ-65ರ ಪ್ರಾರಂಭದಿಂದ ಅರಳೀಮರ ವೃತ್ತದವರೆಗೆ ಹೊಂದಿಕೊಂಡಿರುವುದರಿಂದ ಭಾರಿ ಸರಕು ವಾಹನಗಳನ್ನು ನಿಷೇಧಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಗೂ ಸಂಜೆ 5ಕ್ಕೆ ಅತಿ ಹೆಚ್ಚು ಟ್ರಾಫಿಕ್ ಇರುವುದರಿಂದ ಈ ಸಮಯ ಹೊರತುಪಡಿಸಿ ಭಾರಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಹಮಾಲಿಗಳು, ವರ್ತಕರು, ಅಂಗಡಿ ಮಾಲೀಕರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಿಷ್ಯಂತ್‌, ‘ಇಂದಿನ ಜನಸಂಖ್ಯೆಗೆ ಹಾಗೂ ವಾಹನ ದಟ್ಟಣೆಗೆ ಹೋಲಿಸಿದರೆ ಈ ರಸ್ತೆಗಳು ಕಿರಿದಾಗಿವೆ. ಇಲ್ಲಿ ಪ್ರತಿಷ್ಠಿತ ವಾಣಿಜ್ಯ ಮಳಿಗೆಗಳು, ಜನವಸತಿ ಪ್ರದೇಶಗಳು ಹಾಗೂ ಶಾಲಾ–ಕಾಲೇಜು ಇರುವುದರಿಂದ, ರಸ್ತೆಯ ಒಂದು ಭಾಗದಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಹಾಗೂ ಭಾರಿ ಸರಕು ವಾಹನಗಳಿಂದಾಗಿ ಲಘು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪಾದಾಚಾರಿಗಳು ರಸ್ತೆ ಮಧ್ಯೆ ಓಡಾಡುವುದರಿಂದ ಸಂಚಾರ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಭಾರಿ ಸರಕು ವಾಹನಗಳು ರಾತ್ರಿ 8 ಗಂಟೆಯ ನಂತರ ಪ್ರವೇಶ ಮಾಡಬಹುದು. ಮರುದಿನ ಬೆಳಿಗ್ಗೆ 8 ಗಂಟೆಯ ಒಳಗೆ ಸರಕು ವಿಲೇವಾರಿ ಮಾಡುವುದು ಅಥವಾ ತುಂಬಿಕೊಂಡು ಈ ಭಾಗದಿಂದ ಹೊರಹೋಗುವುದರಿಂದ ಪಾದಾಚಾರಿಗಳ, ಲಘು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ದಾವಣಗೆರೆ ರಾಜ್ಯಕ್ಕೆ ಮೊದಲ ಸ್ಥಾನ ಹಾಗೂ ದೇಶಕ್ಕೆ 19ನೇ ಸ್ಥಾನದಲ್ಲಿದೆ. ಅದರಂತೆ ಟ್ರಾಫಿಕ್‌ ವಿಚಾರದಲ್ಲೂ ಸ್ಮಾರ್ಟ್‌ ಆಗಿರಬೇಕಾದರೆ ನಗರದ ಹಳೆ ಭಾಗದ ಟ್ರಾಫಿಕ್ ಸಮಸ್ಯೆಯನ್ನು ಮೊದಲು ತಪ್ಪಿಸಬೇಕಿದೆ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ., ಡಿವೈಎಸ್ಪಿ ನಾಗೇಶ್ ಐತಾಳ್, ಆರ್.ಟಿ.ಒ ಶ್ರೀಧರ್ ಮಲ್ಲಾಡ್, ಸಿಪಿಐ ಗಜೇಂದ್ರಪ್ಪ, ತಿಮ್ಮಣ್ಣ, ಪಿಎಸ್‌ಐ ಇಮ್ರಾನ್, ಶ್ರೀಧರ್, ಮಹಾನಗರ ಪಾಲಿಕೆ ಸದಸ್ಯರು, ವಾಣಿಜ್ಯ ಘಟಕ, ವರ್ತಕರ ಸಂಘ, ಲಾರಿ ಮಾಲೀಕರ ಮತ್ತು ಚಾಲಕರ ಅಸೋಸಿಯೇಷನ್, ಹಮಾಲರ ಸಂಘ, ಗೂಡ್ಸ್ ಮತ್ತು ಆಟೊ ಚಾಲಕರ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

**
ಬ್ಯಾರಿಕೇಡ್ ಹಾಕುವ ಸ್ಥಳ
ಮಂಡಿಪೇಟೆ ರಸ್ತೆಯ ಎಸ್.ಬಿ.ಎಂ ಬ್ಯಾಂಕ್ ಎದುರು, ತರಳಬಾಳು ಜ್ಯೂವೆಲರ್ಸ್‌ ಅಂಗಡಿ ಹತ್ತಿರ, ಮಹಾವೀರ ರಸ್ತೆಯ ಕೆ.ಆರ್.ರಸ್ತೆ ಪ್ರವೇಶ ಪ್ರಾರಂಭ ಸ್ಥಳ, ಎಕ್ಸ್-ಮುನ್ಸಿಪಲ್ ರಸ್ತೆ ಕೆ.ಆರ್.ರಸ್ತೆ ಪ್ರವೇಶ ಪ್ರಾರಂಭ ಸ್ಥಳ, ಎನ್.ಆರ್ ರಸ್ತೆಯ ಕೆ.ಆರ್ ರಸ್ತೆ ಜಗಳೂರು ಬಸ್‌ನಿಲ್ದಾಣದ ಸಮೀಪ ಪ್ರಾರಂಭ ಸ್ಥಳ, ಹಳೇ ಬೇತೂರು ರಸ್ತೆಯ ಕೆ.ಆರ್ ರಸ್ತೆ ಕೋಹಿನೂರು ಹೋಟೆಲ್ ಬಳಿ, ಬೂದಿಹಾಳ್ ರಸ್ತೆಯ ಮದಕರಿ ವೃತ್ತ ಇಂದಿರಾ ಕ್ಯಾಂಟಿನ್ ಬಳಿ ಭಾರಿ ಸರಕು ವಾಹನ ಪ್ರವೇಶ ನಿಷೇಧಿತ ರಸ್ತೆಗಳೆಂದು ಗುರುತಿಸಿ ಬ್ಯಾರಿಕೇಡ್ ಅಳವಡಿಸಲು ಉದ್ದೇಶಿಸಲಾಗಿದೆ.

**
‘ಟ್ರಾಫಿಕ್‌ನಿಂದ ರೋಸಿ ಹೋಗಿದ್ದೇವೆ’
ಹಳೆ ಭಾಗದ 6 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ಹೆಚ್ಚಾಗಿದೆ. ಐಷಾರಾಮಿ ಕಾರುಗಳು ರಸ್ತೆಗೆ ಅಡ್ಡಲಾಗಿ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಟ್ರಾಫಿಕ್‌ ಸಮಸ್ಯೆಯಾಗುತ್ತಿದೆ. ತಳ್ಳುವ ಗಾಡಿಗಳು ರಸ್ತೆಯ ಮಧ್ಯದಲ್ಲೇ ನಿಲ್ಲಿಸುವುದರಿಂದ ಹಾಗೂ ಫುಟ್‌ಪಾತ್‌ಗಳಲ್ಲಿ ಹೂವು, ಹಣ್ಣು, ತರಕಾರಿಗಳನ್ನು ಮಾರಾಟ ಮಾಡುವುದರಿಂದ ವಾಹನ ಸವಾರರು ರೋಸಿ ಹೋಗಿದ್ದಾರೆ.
– ಆಟೊ ಚಾಲಕರ ಸಂಘದ ಪದಾಧಿಕಾರಿಗಳು

**
ರಾತ್ರಿ ಸುರಕ್ಷತೆ ಇರುವುದಿಲ್ಲ
ರಾತ್ರಿಯ ಸಮಯದಲ್ಲಿ ಲಾರಿ ಓಡಿಸಲು ಆಗುವುದಿಲ್ಲ. ನಮಗೂ ಕುಟುಂಬ–ಮಕ್ಕಳಿದ್ದಾರೆ. ರಾತ್ರಿ ಸಮಯದಲ್ಲಿ ಸೂಕ್ತ ರಕ್ಷಣೆ ಇರುವುದಿಲ್ಲ. ಕತ್ತಲಲ್ಲಿ ಲೋಡ್, ಅನ್‌ಲೋಡ್‌ ಮಾಡುವುದೂ ಸಮಸ್ಯೆಯಾಗಲಿದೆ. ನಮಗೇನಾದರೂ ಆದರೆ ನಮ್ಮ ಕುಟುಂಬ ಬೀದಿ ಪಾಲಾಗುತ್ತದೆ. ಹೀಗಾಗಿ ರಾತ್ರಿ ಸಮಯ ಹೊರತುಪಡಿಸಿ ಸಮಯ ನಿರ್ಧರಿಸಬೇಕು.
– ಲಾರಿ ಮಾಲೀಕರು ಹಾಗೂ ಚಾಲಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT