ದಾವಣಗೆರೆ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹೂವಿನ ವ್ಯಾಪಾರಿಗಳ ಸಂಘದಿಂದ ಪತ್ರಿಕೆ ವಿತರಕರಿಗೆ, ಪೌರಕಾರ್ಮಿಕರಿಗೆ, ಹೂವು ಮಾರಾಟಗಾರರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಭಾರತ್ ಕಾಲೊನಿಯ ಪುಷ್ಪ ಹರಾಜು ಕೇಂದ್ರದಲ್ಲಿ ನಡೆಯಿತು.
ಮೇಯರ್ ಜಯಮ್ಮ ಗೋಪಿನಾಯ್ಕ್ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಕನ್ನಡ ಪ್ರೀತಿ, ಕನ್ನಡದ ಚೈತನ್ಯ ಹೆಚ್ಚಾಗುತ್ತಿದೆ. ಹಿಂದೆ 2–3 ರಾಜ್ಯೋತ್ಸವ ಕಾರ್ಯಕ್ರಮಗಳು ಆಗುತ್ತಿದ್ದವು. ಈಗ 15–20 ಕಾರ್ಯಕ್ರಮಗಳಾಗುತ್ತಿರುವುದು ಇದಕ್ಕೆ ಸಾಕ್ಷಿ. ಕನ್ನಡ ಅಂದರೆ ರಸದೌತಣ, ವ್ಯವಹಾರದ ಅಸ್ತ್ರ. ನಮ್ಮ ಸಂಸ್ಕೃತಿ’ ಎಂದು ಬಿಜೆಪಿ ಹಿಂದುಳಿದ ವರ್ಷಗಳ ಮೋರ್ಚಾದ ಜಿಲ್ಲಾ ಕೋಶಾಧಿಕಾರಿ ಆನಂದಪ್ಪ ಎಸ್.ಎಲ್. ಹೇಳಿದರು.
ಕನ್ನಡಕ್ಕೆ ಸಾಹಿತ್ಯ, ವಚನ, ಕಾವ್ಯ ಎಲ್ಲವೂ ಮುಖ್ಯ. ಆದರೆ ಕನ್ನಡ ಅಷ್ಟಕ್ಕೇ ಉಳಿಯುವುದಿಲ್ಲ. ಜನಸಾಮಾನ್ಯರು ನಿತ್ಯ ಮಾತನಾಡಿದಾಗ ಉಳಿಯುತ್ತದೆ ಎಂದರು.
ಪಾಲಿಕೆ ಸದಸ್ಯ ಬಿ.ಜಿ. ಅಜಯ್ಕುಮಾರ್, ‘ಹಿಂದೆ ಪುಷ್ಪ ಮಾರಾಟ ಕೇಂದ್ರದಲ್ಲಿ ಪರಭಾಷೆಗಳೇ ವ್ಯವಹಾರದಲ್ಲಿದ್ದವು. ಈಗ ಕನ್ನಡದಲ್ಲೇ ನಡೆಯುತ್ತಿರುವುದು ಸಂತಸದ ಸಂಗತಿ’ ಎಂದು ತಿಳಿಸಿದರು.
ಕರಾವಳಿ ಕಡೆಗೆ ಕೇರಳದ ಪ್ರಭಾವ, ಬೆಳಗಾವಿ ಕಡೆಗೆ ಮರಾಠಿ ಪ್ರಭಾವ, ಬೆಂಗಳೂರಿನಲ್ಲಿ ತಮಿಳು ಪ್ರಭಾವ, ಬಳ್ಳಾರಿ ಕಡೆಗೆ ತೆಲುಗು ಪ್ರಭಾವ ಹೆಚ್ಚಿದೆ. ಮಧ್ಯಕರ್ನಾಟಕದಲ್ಲಿ ಮಾತ್ರ ಅಚ್ಚ ಕನ್ನಡ ಬಳಕೆಯಾಗುತ್ತಿದೆ. ಹಿಂದೆ ಕನ್ನಡಕ್ಕೆ ಕುತ್ತು ಬಂದಾಗ ಕನ್ನಡ ಹೋರಾಟಗಾರರು ಮಾತ್ರ ಚಳವಳಿ ಮಾಡುತ್ತಿದ್ದರು. ಈಗ ಆಟೊ ಚಾಲಕರಿಂದ ಹಿಡಿದು ಎಲ್ಲರೂ ಹೋರಾಟ ಮಾಡುತ್ತಾರೆ. ಇದು ಉತ್ತಮ ವಿಚಾರ ಎಂದು ಹೇಳಿದರು.
ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್.ಎಚ್. ಹಾಲೇಶ್, ನಜೀರ್ಸಾಬ್, ಪ್ರಸನ್ನ, ಮಂಜುನಾಯ್ಕ ಬಸಾಪುರ ಇದ್ದರು. ಸಾಯಿ ಇವೆಂಟ್ಸ್ ಚನ್ನಗಿರಿ ಕಿರಣ್, ವಾಸು ಗೀತೆಗಳನ್ನು ಹಾಡಿದರು. ರಾಖಿ, ಶ್ರೀರಾಮ್, ಕರಿಬಸಪ್ಪ, ನವೀನ್, ರಘುನಾಥ್, ಮಲ್ಲಿಕಾರ್ಜುನ, ನಾಗರಾಜ್, ವಿಜಯ್ಕುಮಾರ್, ಸತೀಶ್, ಗೋಪಿಕಟ್ಟಿ, ರಾಮು ಎಸ್.ಎನ್. ಶಾಂತವೀರ್, ಸಿದ್ದೇಶ್, ಮಲ್ಲೇಶ್, ಶಂಬು, ವೆಂಕಟೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.