ದಾವಣಗೆರೆ: ‘ರೈತಪರ, ಕನ್ನಡಪರ ಹೋರಾಟ ಸೇರಿದಂತೆ ಅನೇಕ ಚಳವಳಿಯಲ್ಲಿ ಪಾಲ್ಗೊಂಡು ನೂರಾರು ಕೇಸುಗಳನ್ನು ಹಾಕಿಸಿಕೊಂಡಿರುವವನು ನಾನು, ಸಕ್ರಿಯ ರಾಜಕಾರಣದಲ್ಲಿರುವವನೇ ಹೊರತು ರೆಡಿಮೇಡ್ ಫುಡ್ ಅಲ್ಲ. ನಿನ್ನೆ ಮೊನ್ನೆ ಬಂದು ನನ್ನ ವಿರುದ್ಧ ಮಾತಾಡುವವರಿಗೆ ನಾನು ಮಹತ್ವಕೊಡಬೇಕಿಲ್ಲ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದರು.
ದಾವಣಗೆರೆಯ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ 23ನೇ ವರ್ಷದ ಗಣೇಶೋತ್ಸವದಲ್ಲಿ ಪಾಲ್ಗೊಂಡ ನಂತರ ಮಾಜಿ ಸಚಿವ ಸಿ.ಟಿ. ರವಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
‘ನಾನು ಯಾರ ಹಿಡಿತದಲ್ಲಿಯೂ ಇಲ್ಲ, ಬಿ.ಎಸ್. ಯಡಿಯೂರಪ್ಪ ನನ್ನನ್ನು ಬೆಳೆಸಿದರು. ನಾನು ಲಾಲಿಪಪ್ ತಿನ್ನುವನನ್ನಲ್ಲ. ನನ್ನ ಶಕ್ತಿ ಕಾರ್ಯಕರ್ತರು ಮುಖಂಡರಿಗೆ ಗೊತ್ತಿದೆ. ಬಿಜೆಪಿಯಲ್ಲಿ ಎಲ್ಲರ ಬಗ್ಗೆಯು ನನಗೆ ಗೊತ್ತಿದೆ. ಬಕೆಟ್ ರಾಜಕಾರಣ ಮಾಡುವುದಿಲ್ಲ’ ಎಂದರು.
‘ಕಾಂಗ್ರೆಸ್ಗೆ ಹೋಗುತ್ತೇನೆ ಎಂದೂ ನಾನು ಎಲ್ಲೂ ಹೇಳಿಲ್ಲ. ರಾಜ್ಯಕ್ಕೆ ಬಿ.ಎಸ್.ಯಡಿಯೂರಪ್ಪ, ದೇಶಕ್ಕೆ ಮೋದಿ ಎನ್ನುವವನು ನಾನು. ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ ನಾನು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ್ದೆ. 2011ರಲ್ಲಿ ಶಾಮನೂರು ಶಿವಶಂಕರಪ್ಪ ಜೊತೆಗೆ ವಿಮಾನದಲ್ಲಿ ಬಂದಿದ್ದೆ. ಹಾಗಂತ ಕಾಂಗ್ರೆಸ್ಗೆ ಹೋಗಿದ್ದರು ಎಂದೂ ಯಾಕೆ ಹೇಳಲಿಲ್ಲ? ನಾನು ಬಿಜೆಪಿ ಕಟ್ಟಾಳು ಎಂದು ಎದೆ ಬಗೆದು ತೋರಿಸಬೇಕಾ’ ಎಂದು ಪ್ರಶ್ನಿಸಿದರು.
‘ನಾನು ಸಂಸದ ಸಿದ್ದೇಶ್ವರ ಅವರ ವಿರುದ್ಧ ಮಾತಾಡಿಲ್ಲ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೇನೆ ಹೊರತು ಹಾದಿಬೀದಿಯಲ್ಲಿ ಮಾತನಾಡಿಲ್ಲ. ರೇಣುಕಾಚಾರ್ಯ ಯಾರ ಹಿಡಿತದಲ್ಲಿಯೂ ಇಲ್ಲ. ನನ್ನನ್ನು ಯಡಿಯೂರಪ್ಪ ಬೆಳೆಸಿದ್ದು, ಹಾಗಾಗಿ ನನ್ನ ಶ್ರದ್ಧೆ ಯಡಿಯೂರಪ್ಪ ಮತ್ತು ಬಿಜೆಪಿಯ ಮೇಲಿದೆ’ ಎಂದು ಮಾರ್ಮಿಕವಾಗಿ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.