ದಾವಣಗೆರೆ: ‘ಬಿಬಿಎಂ ಮಾಡುತ್ತೇನೆ. ಬಳಿಕ ಇಂಡಿಯನ್ ಫಾರೆಸ್ಟ್ ಸರ್ವಿಸ್ (ಐಎಫ್ಎಸ್) ಪಾಸ್ ಮಾಡುತ್ತೇನೆ. ಪರಿಸರ, ಪ್ರಾಣಿ ಪಕ್ಷಿಗಳು ನಾಶವಾಗುತ್ತಿವೆ. ಅವುಗಳನ್ನು ಉಳಿಸಲು ಕ್ರಮ ಕೈಗೊಂಡು ಭಾರತಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತೇನೆ’.
ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಆರ್.ಜಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಐ.ಪಿ. ಅವಳ ಮಾತಿದು.
ಉದ್ಯಮಿ, ಎಂಸಿಸಿ ಬಿ ಬ್ಲಾಕ್ ನಿವಾಸಿ ಪ್ರಶಾಂತ್ ಆರಾಧ್ಯ–ಶ್ವೇತಾ ಆರಾಧ್ಯ ದಂಪತಿಯ ಮಗಳಾಗಿರುವ ಸಂಜನಾ ‘ಪ್ರಜಾವಾಣಿ’ ಜತೆ ಕನಸುಗಳನ್ನು ಬಿಚ್ಚಿಟ್ಟಳು.
‘ಕಾಲೇಜಿನಲ್ಲಿ ಪ್ರತಿದಿನ ಹೊಸತನವನ್ನು ಹೇಳಿಕೊಡುತ್ತಿದ್ದರು. ಪ್ರೋತ್ಸಾಹಿಸುತ್ತಿದ್ದರು. ಮನೆಯಲ್ಲಿ ಅಪ್ಪ, ಅಮ್ಮ ಕಲಿಕೆಗೆ ಬೇಕಾದ ಎಲ್ಲವನ್ನು ಒದಗಿಸುತ್ತಿದ್ದರು. ಅಂತಿಮ ಬಿಕಾಂ ಓದುತ್ತಿರುವ ಅಕ್ಕ ಸಿಂಚನಾ ನನಗೆ ಬೆಂಬಲ ನೀಡುತ್ತಿದ್ದಳು. ಪ್ರತಿದಿನ ಎರಡು ಮೂರು ಗಂಟೆ ಓದುತ್ತಿದ್ದೆ. ಯಾವ ರೀತಿ ಓದಬೇಕು ಎಂದು ಕಾಲೇಜಿನಿಂದ ಮಾರ್ಗದರ್ಶನ ನೀಡುತ್ತಿದ್ದರು. ನಾನು ಗೈಡ್ಗಳನ್ನು ಓದದೇ ಪಠ್ಯಪುಸ್ತಕವನ್ನೇ ಬಹಳ ಓದುತ್ತಿದ್ದೆ’ ಎಂದು ನೆನಪಿಸಿಕೊಂಡಳು.
‘ನೃತ್ಯ ಮಾಡೋದು, ಕಾದಂಬರಿ ಓದೋದು, ಚಿತ್ರ ಬಿಡುಸುವುದು. ಥ್ರೋಬಾಲ್, ಬ್ಯಾಸ್ಕೆಟ್ಬಾಲ್, ಶಟ್ಲ್ ಬ್ಯಾಡ್ಮಿಂಟನ್ ಸಹಿತ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದು, ಆ್ಯಂಕರಿಂಗ್ ಮಾಡುವುದು ಎಲ್ಲ ನನಗೆ ಇಷ್ಟ. ಇದೆಲ್ಲವನ್ನು ಕಾಲೇಜಿನಲ್ಲಿ ಮಾಡಿದ್ದೇನೆ’ ಎಂದಳು.