ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ವನ’ಕ್ಕೆ ಸಿಗುವುದೇ ಮುಕ್ತಿ?

ದಾವಣಗೆರೆ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಉದ್ಯಾನಕ್ಕೆ ಬಿದ್ದಿದೆ ಬೀಗ
Last Updated 1 ನವೆಂಬರ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯೋತ್ಸವ ಬಂದಾಗಲೆಲ್ಲ ನೆನಪಾಗುವುದು ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್‌ನ ‘ಕನ್ನಡ ವನ’ ಉದ್ಯಾನ. ಆದರೆ, ಈಚೆಗೆ ಕೆಲ ತಿಂಗಳುಗಳಿಂದ ಈ ಕನ್ನಡ ವನಕ್ಕೆ ಬೀಗ ಬಿದ್ದಿರುವುದರಿಂದ ಕನ್ನಡ ಪ್ರೇಮಿಗಳಿಗೆ, ಪರಿಸರ ಪ್ರಿಯರಿಗೆ ಅಸಮಾಧಾನ ಉಂಟಾಗಿದೆ.

ಆದಿಕವಿಗಳಾದ ಪಂಪ, ರನ್ನ, ಹರಿಹರ, ರಾಘವಾಂಕರಿಂದ ಹಿಡಿದು ಜ್ಞಾನಪೀಠ ಪ್ರಶಸ್ತಿ ವಿಜೇತರು, ಹಲವು ಕನ್ನಡ ಸಾಹಿತಿಗಳು, ಚಳವಳಿಗಾರರ ಸುಂದರ ಚಿತ್ರಗಳು ಇಲ್ಲಿಯ ಕಾಂಪೌಂಡ್‌ ಗೋಡೆಯ ಉದ್ದಕ್ಕೂ ಮೈತಳೆದಿವೆ. ಅಕ್ಕಮಹಾದೇವಿ, ಭುವನೇಶ್ವರಿ ದೇವಿಯ ಸುಂದರ ಚಿತ್ರಗಳು ಕಲಾಸಕ್ತರನ್ನೂ, ಕನ್ನಡಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ. ಅದರೊಂದಿಗೆ ಬರೆಸಿರುವ ಅವರ ವಿವರ ಕನ್ನಡದ ಜ್ಞಾನ ಭಂಡಾರದತ್ತ ಆಸಕ್ತಿ ಹುಟ್ಟಿಸುವಂತಿವೆ. ಇಲ್ಲಿ ಬೆಳೆದಿರುವ ಬೃಹತ್ ವೃಕ್ಷಗಳು, ಆಲಂಕಾರಿಕ ಸಸ್ಯಗಳೂ ಪರಿಸರ ಪ್ರಿಯರಿಗೆ ಮುದ ನೀಡುತ್ತವೆ. ಕಳೆದ ಹಲವು ವರ್ಷಗಳಿಂದ ನಿತ್ಯ ಇಲ್ಲಿ ಬಂದು ಹೋಗುತ್ತಿದ್ದವರಿಗೆ ಈಗ ಈ ಉದ್ಯಾನ ಮುಚ್ಚಿರುವುದು ಬೇಸರ ಮೂಡಿಸಿದೆ.

ಸದ್ಯ ಇಲ್ಲಿರುವ ಕನ್ನಡ ಸಾಹಿತಿಗಳ ಸುಂದರ ಚಿತ್ರಗಳ ಎದುರು ಗಿಡಗಂಟಿಗಳು ಬೆಳೆದು ನಿಂತು ಚಿತ್ರಗಳು ಕಾಣದಂತೆ ಮಾಡಿವೆ. ನಿರ್ವಹಣೆ ಇಲ್ಲದಿರುವುದರಿಂದ ಒಣ ಎಲೆ ಹಾಗೂ ಕಸದ ರಾಶಿ ಎಲ್ಲೆಡೆ ಹರಡಿದೆ. ಉದ್ಯಾನದಲ್ಲಿ ಹಾಕಿದ್ದ ಹಲವು ಬೆಂಚುಗಳೂ ಮುರಿದಿವೆ. ಹಲವು ಸುಂದರ ಹೂಗಿಡಗಳು ನೀರು, ನಿರ್ವಹಣೆ ಇಲ್ಲದೇ ಸತ್ತು ಹೋಗಿವೆ.

‘12 ವರ್ಷಗಳ ಹಿಂದೆ ಈ ಜಾಗದಲ್ಲಿ ಕಸ ಹಾಕುತ್ತಿದ್ದರು. ಈ ಜಾಗವನ್ನು ಕಬಳಿಸಲು ಹಲವರು ಯತ್ನಿಸುತ್ತಿದನ್ನು ಕಂಡು ನಾನು ಸ್ಥಳೀಯರ ಸಹಾಯ ಪಡೆದು ಇಲ್ಲಿ ಹಲವು ಗಿಡಗಳನ್ನು ನೆಡಿಸಿದೆ. ನಾನೇ ಸ್ವತಃ ಹಲವು ಸಸ್ಯಗಳನ್ನು ತಂದು ನೆಟ್ಟಿದ್ದೇನೆ. ಪಕ್ಕದಲ್ಲೇ ಈಜುಕೊಳ ಇದ್ದ ಕಾರಣ ಹಲವು ಮಕ್ಕಳು ಇಲ್ಲಿಗೆ ಬರುತ್ತಿದ್ದರು. ಹೀಗಾಗಿ ಅವರಲ್ಲಿ ಕನ್ನಡ ಜಾಗೃತಿ ಮೂಡಿಸಲು ಚಿತ್ರಕಲಾವಿದರನ್ನು ಕರೆಸಿ ಸ್ವಂತ ಖರ್ಚಿನಲ್ಲಿ ಕನ್ನಡ ಸಾಹಿತಿಗಳ ಚಿತ್ರಗಳನ್ನು, ಅವರ ಸಾಧನೆಗಳಿರುವ ನುಡಿಗಳನ್ನು ಬರೆಸಿದೆ. ಎಲೆಕ್ಟ್ರಿಕಲ್ ಕಂಬಗಳನ್ನೂ ಸ್ವತಃ ನೆಟ್ಟಿದ್ದೇನೆ. ಇಲ್ಲಿ ನಿತ್ಯವೂ ಹಲವು ಹಿರಿಯ ನಾಗರಿಕರು, ಮಕ್ಕಳು ಬಂದು ವ್ಯಾಯಾಮ ಮಾಡುತ್ತಿದ್ದರು. ಆದರೆ, ಈಚೆಗೆ ಪಾಲಿಕೆ ಇದಕ್ಕೆ ಬೀಗ ಹಾಕಿ ಇರಿಸಿದೆ. ಇದು ಸಾರ್ವಜನಿಕರ ಸ್ವತ್ತು. ಆದರೆ, ಈಗ ಸಾರ್ವಜನಿಕರು ಓಡಾಡಲು, ಕುಳಿತುಕೊಳ್ಳಲು ಅವಕಾಶವಿಲ್ಲದಂತಾಗಿದೆ. ನಾವು ಇದನ್ನು ಇಷ್ಟು ವರ್ಷಗಳ ಕಾಲ ಉತ್ತಮವಾಗಿ ನಿರ್ವಹಣೆ ಮಾಡಿದ್ದೆವು. ಈಗ ನೋಡಿ ಪಾಲಿಕೆ ವಶಕ್ಕೆ ಪಡೆದ ನಂತರ ಹೇಗಾಗಿದೆ’ ಎಂದು ಕನ್ನಡ ಸೇನೆಯ ಅಧ್ಯಕ್ಷ ಹಾಗೂ ಪರಿಸರ ಪ್ರೇಮಿ ಗೋಪಾಲಗೌಡ ಹೇಳಿದರು.

‘ನಾಯಿ ಹಾಗೂ ಹಸುಗಳಿಗೆ ಕುಡಿಯುಲು ನೀರು ಹಾಕಲು ಕಲ್ಲು ಬಾನಿಯೊಂದನ್ನು ಉದ್ಯಾನದ ಹೊರಗೆ ಇರಿಸಿದ್ದೆವು. ಈಗ ಅದನ್ನೂ ನೀರು ತುಂಬಿಡದಂತೆ ಮಗುಚಿ ಹಾಕಿದ್ದಾರೆ’ ಎಂದು ಅವರು ದೂರಿದರು.

‘ಈ ಉದ್ಯಾನ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮ ಪಟ್ಟಿದ್ದೇವೆ. ಇಲ್ಲಿರುವ ಸಾಹಿತಿಗಳ ಚಿತ್ರಗಳನ್ನು ನೋಡುತ್ತಿದ್ದರೆ ಮಹದಾನಂದವಾಗುತ್ತದೆ. ಕನ್ನಡದ ಬಗ್ಗೆ ಹೆಮ್ಮೆ ಮೂಡುತ್ತದೆ. ಇಂಥ ಉತ್ತಮ ಉದ್ಯಾನಕ್ಕೆ ಬೀಗ ಹಾಕಿಡುವುದು ಸರಿಯಲ್ಲ. ತಕ್ಷಣ ಇದನ್ನು ಸಾರ್ವಜನಿಕರ ಬಳಕೆಗೆ ನೀಡಬೇಕು’ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ನಿವೃತ್ತ ಎಂಜಿನಿಯರ್ ಒಬ್ಬರು ಒತ್ತಾಯಿಸಿದರು.

15 ದಿನಗಳಲ್ಲಿ ಉದ್ಯಾನ ಮಾರ್ಗಸೂಚಿ ಸಿದ್ಧ

ಈ ಹಿಂದೆ ನಿರ್ವಹಣೆ ಮಾಡುತ್ತಿದ್ದವರ ಅವಧಿ ಮುಗಿದಿರುವುದರಿಂದ ‘ಕನ್ನಡ ವನ’ಕ್ಕೆ ಬೀಗ ಹಾಕಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನಗರದ ಉದ್ಯಾನಗಳ ನಿರ್ವಹಣೆಗೆ ಆಸಕ್ತಿ ಇರುವ ಸಂಘ, ಸಂಸ್ಥೆಗಳು, ಬ್ಯಾಂಕ್, ಶಾಲಾ–ಕಾಲೇಜುಗಳಿಗೆ ಅವಕಾಶ ಮಾಡಿಕೊಡಲಾಗುವುದು. ಸೂಕ್ತ ಮಾರ್ಗಸೂಚಿ ಸಿದ್ಧಗೊಂಡ ಕೂಡಲೇ ಅರ್ಜಿ ಕರೆಯಲಾಗುವುದು. ಇನ್ನು 15 ದಿನಗಳಲ್ಲಿ ಈ ಮಾರ್ಗಸೂಚಿ ಸಿದ್ಧವಾಗಲಿದೆ. ನಿರ್ವಹಣೆಗೆ ಸೂಕ್ತ ಸಂಸ್ಥೆಯ ನೇಮಕವಾದ ಕೂಡಲೇ ‘ಕನ್ನಡ ವನ’ ಸಾರ್ವಜನಿಕರಿಗೆ ಮುಕ್ತವಾಗಲಿದೆ.

– ಎಸ್.ಟಿ. ವೀರೇಶ್, ಮೇಯರ್

***

ಶೀಘ್ರದಲ್ಲೇ ಉದ್ಯಾನ ತೆರೆಯಲಿದೆ

ಈ ಹಿಂದೆ ನಿರ್ವಹಣೆ ಮಾಡುತ್ತಿದ್ದವರ ಅವಧಿ ಮುಗಿದಿತ್ತು. ಕೆಲವರು ಈ ಜಾಗವನ್ನು ಸ್ವಂತ ಆಸ್ತಿಯೆಂಬಂತೆ ಬಳಸಿಕೊಳ್ಳುತ್ತಿದ್ದರು. ಉದ್ಯಾನಕ್ಕೆ ಬಂದ ಕೆಲವರನ್ನು ಹೊರಗೆ ಕಳುಹಿಸಿದ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದವು. ಹೀಗಾಗಿ ಮೇಯರ್‌ಗೆ ತಿಳಿಸಿ, ಮತ್ತೆ ಪಾಲಿಕೆ ವಶಕ್ಕೆ ನೀಡಿದ್ದೇವೆ. ಇನ್ನು ಕೆಲ ದಿನಗಳಲ್ಲೇ ಈ ಉದ್ಯಾನ ನಿರ್ವಹಣೆಗಾಗಿ ಟೆಂಡರ್ ಆಗಲಿದೆ. ಹಿಂದೆ ನಿರ್ವಹಣೆ ಮಾಡುತ್ತಿದ್ದವರೇ ಈಗ ಎರಡು ದಿನಗಳ ಮುಂಚೆ ಬಂದು ಉದ್ಯಾನ ಸ್ವಚ್ಛ ಮಾಡಿಕೊಟ್ಟು ಹೋಗಿದ್ದಾರೆ.

– ಮಂಜುನಾಥ್ ಗಡಿಗುಡಾಳ್, ಮಹಾನಗರ ಪಾಲಿಕೆ ಸದಸ್ಯ, ಎಂ.ಸಿ.ಸಿ. ‘ಬಿ’ ಬ್ಲಾಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT