ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಪರಿವರ್ತನೆ: ಸೂಕ್ಷ್ಮವಾಗಿ ಪರಿಶೀಲಿಸಿ

ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ ಪ್ರಾದೇಶಿಕ ಆಯುಕ್ತ ನವೀನ್‍ರಾಜ್
Last Updated 5 ಆಗಸ್ಟ್ 2021, 2:08 IST
ಅಕ್ಷರ ಗಾತ್ರ

ದಾವಣಗೆರೆ: ಭೂ ಪರಿವರ್ತನೆಗೆ ಸಂಬಂಧಿಸಿದ ವರದಿಗಳ ಕಡತಗಳನ್ನು ತಹಶೀಲ್ದಾರರು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಭೂ ಪರಿವರ್ತನೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇತ್ತೀಚೆಗೆ ಕೆಲವು ತೀರ್ಪುಗಳನ್ನು ನೀಡಿದೆ. ಅವುಗಳನ್ನು ತಿಳಿದುಕೊಳ್ಳಬೇಕು. ಭೂಪರಿವರ್ತನೆ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ತಹಶೀಲ್ದಾರರು ನೀಡಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಳಿಕವೇ ಪ್ರಕರಣಗಳಿಗೆ ಅನುಗುಣವಾಗಿ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ವರ್ಷ ಒಟ್ಟು 14 ಕಂದಾಯ ಅದಾಲತ್‍ಗಳನ್ನು ನಡೆಸಲಾಗಿದೆ. ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ಒಟ್ಟು 969 ಅರ್ಜಿಗಳು ಸ್ವೀಕೃತಗೊಂಡಿದ್ದು, 882 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 34 ತಿರಸ್ಕೃತಗೊಂಡಿವೆ. 53 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಖಾತೆ ಬದಲಾವಣೆಗೆ ಒಟ್ಟು 598 ಅರ್ಜಿಗಳು ಸ್ವೀಕೃತಗೊಂಡಿದ್ದು, 551 ಅರ್ಜಿಗಳನ್ನು ಇತ್ಯರ್ಥಪಡಿಸಿದೆ. 14 ತಿರಸ್ಕೃತಗೊಂಡಿದ್ದು, 33 ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 73 ಕಂದಾಯ ಗ್ರಾಮಗಳ ರಚನೆಯಾಗಬೇಕಿದೆ. 24 ಗ್ರಾಮಗಳಿಗೆ ಸಂಬಂಧಿಸಿದಂತೆ ಆಕಾರ್‌ಬಂದ್ ಸಿದ್ಧಪಡಿಸಿ, ಹೊಸ ಸರ್ವೆ ನಂಬರ್ ರಚಿಸಲಾಗಿದೆ. ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧವಾಗಿವೆ ಎಂದು ಭೂದಾಖಲೆಗಳ ಉಪನಿರ್ದೇಶಕರು ವಿವರ ನೀಡಿದರು.

ಹೊಸ ಕಂದಾಯ ಗ್ರಾಮಗಳ ಆಕಾರ್‌ಬಂದ್ ಸಿದ್ಧಪಡಿಸಿದ ಬಳಿಕ ಅವುಗಳನ್ನು ಡಿಜಿಟಲೈಸೇಷನ್ ಮಾಡುವಂತೆ ಆಯುಕ್ತರು ಸೂಚನೆ ನೀಡಿದರು.

ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕಿನಲ್ಲಿ 3,095 ಎಕರೆ 21 ಗುಂಟೆಗಳ ಪೈಕಿ 2,447 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. 342 ಎಕರೆ ಸಾರ್ವಜನಿಕ ಬಳಕೆ, ಶಾಲೆ, ಸರ್ಕಾರಿ ಕಟ್ಟಡ, ದೇವಸ್ಥಾನ ಮುಂತಾದ ಕಾರಣಗಳಿಗಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಇನ್ನೂ 306 ಎಕರೆ ತೆರವುಗೊಳಿಸುವುದು ಬಾಕಿ ಇದೆ. ಹರಿಹರ ತಾಲ್ಲೂಕಿನಲ್ಲಿ 336 ಎಕರೆ, ಚನ್ನಗಿರಿ ತಾಲ್ಲೂಕಿನಲ್ಲಿ 482 ಎಕರೆ, ಜಗಳೂರು ತಾಲ್ಲೂಕಿನಲ್ಲಿ 469 ಎಕರೆ ಒತ್ತುವರಿ ತೆರವು ಆಗಬೇಕಿದೆ ಎಂದು ಆಯಾ ತಹಶೀಲ್ದಾರರು ವರದಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕಂದಾಯ ಇಲಾಖೆಯ ಇಸ್ಲಾಮುದ್ದೀನ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT