ದಾವಣಗೆರೆ: ‘ಬಿಜೆಪಿ ಅಭ್ಯರ್ಥಿ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಡು ಮತ ಕೇಳುವುದಕ್ಕೆ ಯಾವುದೇ ಸಂಕೋಚವಿಲ್ಲ. ಅವರು ನಮ್ಮ ಧೀಮಂತ ನಾಯಕ. ಕಾಂಗ್ರೆಸ್ಗೆ ತಾಕತ್ ಇದ್ದರೆ ರಾಹುಲ್ ಗಾಂಧಿ ಹೆಸರು ಹೇಳಿ ಮತ ಕೇಳಲಿ’ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸವಾಲು ಹಾಕಿದರು.
ಇಲ್ಲಿನ ಎಸ್ಜೆಎಂ ನಗರ ವ್ಯಾಪ್ತಿಯಲ್ಲಿ ಶನಿವಾರ ಅವರು ಮತಯಾಚಿಸಿ ಮಾತನಾಡಿದರು.
‘ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ನಮ್ಮ ನಾಯಕ ನರೇಂದ್ರ ಮೋದಿ ಅಂತ ಗರ್ವದಿಂದ ಹೇಳಿಕೊಳ್ಳುತ್ತೇವೆ. ಅವರೇ ನಮ್ಮ ಮುಂದಿನ ಪ್ರಧಾನಿ ಅಂತ ಘೋಷಣೆ ಕೂಡ ಮಾಡಿದ್ದೇವೆ. ಆದರೆ ಕಾಂಗ್ರೆಸ್ಸಿಗರಿಗೆ ತಮ್ಮ ನಾಯಕತ್ವದ ಬಗ್ಗೆ ಹೇಳಲು ಯಾವುದೇ ವ್ಯಕ್ತಿ ಇಲ್ಲ’ ಎಂದು ಛೇಡಿಸಿದರು.
‘ಮೋದಿ ಪ್ರಧಾನಿಯಾದ ಮೇಲೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ದೇಶದ ಸಾರ್ವಭೌಮತ್ವ, ಸಂವಿಧಾನ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮೋದಿ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ವಿದ್ಯಾವಂತ ಯುವತಿಯರು ಮೋದಿ ಪರ ಇದ್ದಾರೆ. ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯದ ಮುಸ್ಲಿಮರು ಬಿಜೆಪಿ ಪರ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಮಾಡಿಕೊಂಡು ಹಿಂದೂಗಳ ಮೇಲೆ ಎತ್ತಿ ಕಟ್ಟುತ್ತಿದೆ. ಇದನ್ನು ಪ್ರಜ್ಞಾವಂತರು ತೀಕ್ಷ್ಣವಾಗಿ ಗಮನಿಸಿ ಧರ್ಮ ವಿರೋಧಿ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಜಿ.ಬಿ. ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ವಿಜಯ್, ರಾಜು, ಶಾರದಮ್ಮ, ಗೀತಾ, ಭಾಗ್ಯಮ್ಮ, ಗ್ಯಾರಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಹನುಮಂತು, ಮಂಡಲದ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇದ್ದರು.